ಬೆಂಗಳೂರು: ಕರೊನಾ ಮಣಿಸುವ ಹೋರಾಟಕ್ಕೆ ಸಂಬಂಧಿಸಿದಂತೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬಿ.ಎಸ್. ಯಡಿಯೂರಪ್ಪ ಮಹತ್ವದ ಸಭೆ ನಡೆಸುವಲ್ಲಿ ಬಿಜಿಯಾಗಿದ್ದರು. ಆದರೆ, ಇಲ್ಲೊಬ್ಬ ಅದೇ ಕಚೇರಿ ಮುಂದೆ ಸಿಎಂ ವಿರುದ್ಧ ಬ್ಯಾನರ್ ಕಟ್ಟಿಕೊಂಡು ಹೈ ಡ್ರಾಮಾ ನಡೆಸಿದ್ದಾನೆ.
”ನನ್ನಿಂದಲೇ ಬಿಎಸ್ವೈ ಅವರು ಸಿಎಂ ಆಗಿದ್ದು. ನಾನು ‘ಏಸು’ ಬಳಿ ಪ್ರಾರ್ಥಿಸಿದ್ದಕ್ಕೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ನನ್ನನ್ನು ಯಡಿಯೂರಪ್ಪ ಮರೆತರೆ, ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತಳ್ಳುತ್ತೇನೆ…” ಎಂದು ಬರೆದಿದ್ದ ಬ್ಯಾನರ್ ಅನ್ನು ಕಚೇರಿ ಮುಂದೆ ಕಟ್ಟಿಕೊಂಡು ನಿಂತಿದ್ದ ಮಂಜುನಾಥ್ ಎಂಬಾತ ಕೆಲಕಾಲ ಗೊಂದಲ ಸೃಷ್ಟಿಸಿದ್ದ. ಇದನ್ನೂ ಓದಿರಿ ಮದುವೆ ಮನೆಯ ಅಡುಗೆ ಭಟ್ಟನಿಗೂ ಕರೊನಾ ಸೋಂಕು!
”ನಾನು ಸಿಎಂ ಅವರನ್ನು ಮೀಟ್ ಮಾಡಬೇಕು. ಇದಕ್ಕೆ ಸಿಎಂ ಅಪಾಯಟ್ಮೆಂಟ್ ಕೊಡ್ತಿಲ್ಲ. ಏಸು ಕಡೆಯಿಂದ ಬಿಎಸ್ವೈ ಅವರನ್ನು ನಾನೇ ಸಿಎಂ ಮಾಡಿದ್ದು…” ಎನ್ನುತ್ತ ಮುಖ್ಯಮಂತ್ರಿ ಭೇಟಿಗೆ ಅವಕಾಶ ನೀಡುವಂತೆ ಮಂಜುನಾಥ್ ಪಟ್ಟು ಹಿಡಿದಿದ್ದ.
ಕೂಡಲೇ ಎಚ್ಚೆತ್ತ ಪೊಲೀಸರು ಬ್ಯಾನರ್ ತೆರವುಗೊಳಿಸಿದರು. ಯಾವುದೇ ಪರ್ಮಿಷನ್ ಇಲ್ಲದೆ ಸಿಎಂ ಮನೆ ಮುಂದೆ ಬ್ಯಾನರ್ ಕಟ್ಟುವ ಹಾಗಿಲ್ಲ. ಸಿಎಂ ಭೇಟಿಗೆ ಅನುಮತಿ ತೆಗೆದುಕೊಳ್ಳಲು ನಿಯಮ ಇದೆ ಎಂದು ತಿಳಿಹೇಳಿದರೂ ಜಗ್ಗದ ಆತ ಮುಖ್ಯಮಂತ್ರಿ ಅವರನ್ನು ಭೇಟಿ ಆಗಲೇ ಬೇಕು ಎಂದು ಪಟ್ಟು ಹಿಡಿದಿದ್ದ. ಮಂಜುನಾಥ್ನನ್ನು ಪೊಲೀಸರು ವಶಕ್ಕೆ ಪಡೆದರು.