ಗೋಕಾಕ: ಕರೊನಾ ಸೋಂಕಿತನೊಬ್ಬ ಸಾರ್ವಜನಿಕ ಆಸ್ಪತ್ರೆ ಹಾಗೂ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿದ್ದರಿಂದ ತಾಲೂಕು ವೈದ್ಯಾಧಿಕಾರಿ, ತಾಲೂಕು ದಂಡಾಧಿಕಾರಿ ಕ್ವಾರಂಟೈನ್ ಆಗಿದ್ದಾರೆ. ತಹಸೀಲ್ದಾರ್ ಕಚೇರಿ, ಸಾರ್ವಜನಿಕ ಆಸ್ಪತ್ರೆಯನ್ನು 48 ಗಂಟೆ ಸೀಲ್ಡೌನ್ ಮಾಡಲಾಗುವುದು. ಬಳಿಕ ಸ್ಯಾನಿಟೈಸ್ ಮಾಡಿ ತೆರೆಯಲಾಗುವುದು ಎಂದು ತಾಲೂಕು ವೈದ್ಯಾಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ.
ದುರದುಂಡಿ, ಗುಜನಾಳ, ಖನಗಾಂವ, ಸಿಂಧಿಕುರಬೇಟ, ಗೋಕಾಕ ನಗರದ ಸೋಂಕಿತ ವ್ಯಕ್ತಿಗಳಿರುವ ಪ್ರದೇಶಗಳನ್ನು ಸೀಲ್ಡೌನ್ ಮಾಡಲಾಗಿದೆ. ಸೋಕಿತರ ಸಂಪರ್ಕಕ್ಕೆ ಬಂದಿದ್ದಾರೆನ್ನಲಾದ ಗೋಕಾಕ ಸೇರಿದಂತೆ ಐದು ಗ್ರಾಮದ ಒಟ್ಟು 80 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಜು. 7ರಂದು ಮೃತಪಟ್ಟ ಕೊಣ್ಣೂರಿನ ಮಹಿಳೆ ಭೇಟಿ ನೀಡಿದ್ದ ಖಾಸಗಿ ಆಸ್ಪತ್ರೆ, ಗೋಕಾಕದ ಸ್ಕ್ಯಾನಿಂಗ್ ಸೆಂಟರ್, ಲ್ಯಾಬ್ಗಳನ್ನೂ ಸಹ ಸೀಲ್ಡೌನ್ ಮಾಡಲಾಗಿದೆ.
ಕೊಣ್ಣೂರ ವೈದ್ಯನಿಗೆ ಟಿಎಚ್ಒ ನೋಟಿಸ್: ಬಿಮ್ಸ್ ಆಸ್ಪತ್ರೆ ವೈದ್ಯರ ನಿರ್ಲಕ್ಷೃದಿಂದ ಜು.7ರಂದು ವೃದ್ಧೆ ಮೃತಪಟ್ಟಿದ್ದಾಳೆ ಎಂದು ಹೇಳಿಕೆ ನೀಡಿರುವ ಕೊಣ್ಣೂರ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಬಾಲುಕುಮಾರಗೆ ಟಿಎಚ್ಒ ನೋಟಿಸ್ ನೀಡಿದ್ದಾರೆ. ವೃದ್ಧೆ ಕರೊನಾದಿಂದ ಮೃತಪಟ್ಟಿಲ್ಲ.
ಆಕೆ ಮಧುಮೇಹದಿಂದ ಮೃತಪಟ್ಟಿದ್ದಾರೆ. ಬಿಮ್ಸ್ ನಲ್ಲಿ ಉಪಚಾರ ಸಿಗದೆ ಮೃತಪಟ್ಟಿದ್ದಾಳೆ ಎಂದು ವೈದ್ಯ ಹೇಳಿಕೆ ನೀಡಿದ್ದರು. ಅದಕ್ಕೆ ಸಂಬಂಧಪಟ್ಟಂತೆ ಅವರಿಗೆ ನೋಟಿಸ್ ನೀಡಲಾಗಿದೆ. ಅವರು ತಪ್ಪಾಗಿ ಹೇಳಿಕೆ ನೀಡಿದ್ದಾರೆ. ಅವರಿಂದ ಉತ್ತರ ಬಂದ ನಂತರ ಕ್ರಮ ಜರುಗಿಸಲಾಗುವುದು ಎಂದು ಟಿಎಚ್ಒ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ.