ನವದೆಹಲಿ: ಕೋವಿಡ್ ಸೋಂಕಿನಿಂದಾಗಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಪಡೆಯಲು ಸಹಾಯವಾಗುವಂತೆ ಕೋವಿಡ್ 19 ಸಾವು ಎಂಬ ಪ್ರಮಾಣಪತ್ರಗಳನ್ನು ನೀಡುವ ಬಗ್ಗೆ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಜಾರಿ ಮಾಡಿದೆ. ಈ ಬಗ್ಗೆ ಸರ್ಕಾರದ ವಿಳಂಬನೀತಿಯನ್ನು ಇತ್ತೀಚೆಗೆ ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂ ಕೋರ್ಟ್ ಮುಂದೆ, ಸರ್ಕಾರಿ ವಕೀಲರು ಶನಿವಾರ ಸಂಜೆ ಅಫಿಡೆವಿಟ್ ಮೂಲಕ ಮಾಹಿತಿ ನೀಡಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಐಸಿಎಂಆರ್ ಜಂಟಿಯಾಗಿ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ, ಆರ್ಟಿ-ಪಿಸಿಆರ್ ಪರೀಕ್ಷೆ, ಮಾಲಿಕ್ಯುಲರ್ ಪರೀಕ್ಷೆ, ರಾಪಿಡ್-ಆ್ಯಂಟಿಜನ್ ಪರೀಕ್ಷೆ ಮೂಲಕ, ಅಥವಾ ಆಸ್ಪತ್ರೆಯಲ್ಲಿ ಅಥವಾ ಇತರ ಒಳರೋಗಿಗಳ ಸೌಲಭ್ಯವಿರುವ ಕೇಂದ್ರದಲ್ಲಿ ತನಿಖೆಗಳ ಮೂಲಕ ಅಥವಾ ವೈದ್ಯರಿಂದ ನಿರ್ಧರಿಸಲ್ಪಟ್ಟ ಕೋವಿಡ್ -19 ಪ್ರಕರಣಗಳನ್ನು ಮಾತ್ರ ಪರಿಗಣಿಸಲಾಗುವುದು.
ಇದನ್ನೂ ಓದಿ: ಸಂಕಷ್ಟದಲ್ಲಿ ಶುಲ್ಕ ರಿಯಾಯಿತಿ ನೀಡಿ ; ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಎಸ್. ಮುನಿಸ್ವಾಮಿ ಸಲಹೆ
ಕರೊನಾ ಪಾಸಿಟೀವ್ ಬಂದ ಪರೀಕ್ಷೆಯ ದಿನಾಂಕದಿಂದ ಅಥವಾ ಕೋವಿಡ್ -19 ಪ್ರಕರಣವೆಂದು ವೈದ್ಯಕೀಯವಾಗಿ ನಿರ್ಧರಿಸಿದ ದಿನಾಂಕದಿಂದ 30 ದಿನಗಳೊಳಗೆ ರೋಗಿಯು ಆಸ್ಪತ್ರೆಯಲ್ಲಿ ಅಥವಾ ಆಸ್ಪತ್ರೆಯ ಹೊರಗೆ(ಮನೆಯಲ್ಲಿ ಅಥವಾ ಇತರ ಶುಶ್ರೂಷಾ ಕೇಂದ್ರಗಳಲ್ಲಿ) ಸಾವನ್ನಪ್ಪಿದ್ದರೆ, ಅದನ್ನು ಕೋವಿಡ್ -19 ನಿಂದ ಆದ ಸಾವು ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಲಾಗಿದೆ.
ಜೊತೆಗೆ, ಕರೊನಾ ರೋಗಿಯನ್ನು 30 ದಿನಗಳಿಗಿಂತ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಅಥವಾ ಒಳರೋಗಿ ಸೌಲಭ್ಯದಲ್ಲಿ ದಾಖಲಿಸಲಾಗಿದ್ದು ಅವರು ನಂತರ ಸಾವನ್ನಪ್ಪಿದರೆ ಕೂಡ ಕೋವಿಡ್ -19 ಸಾವು ಎಂದು ಪರಿಗಣಿಸಲಾಗುತ್ತದೆ. ಆದರೆ, ವಿಷ, ಆತ್ಮಹತ್ಯೆ, ಹತ್ಯೆ ಮತ್ತು ಅಪಘಾತದಿಂದ ಸಂಭವಿಸುವ ಸಾವುಗಳನ್ನು ಕೋವಿಡ್ -19 ಸ್ಥಿತಿಯಿದ್ದರೂ ಸಹ, ಕೋವಿಡ್ -19 ಸಾವು ಎಂದು ಪರಿಗಣಿಸಲಾಗುವುದಿಲ್ಲ ಎಂದು ಮಾರ್ಗಸೂಚಿಗಳಲ್ಲಿ ಹೇಳಲಾಗಿದೆ. (ಏಜೆನ್ಸೀಸ್)