ಬೀರೂರು: ಕರೊನಾ ಹಿನ್ನೆಲೆಯಲ್ಲಿ ಏಳೆಂಟು ತಿಂಗಳಿಂದ ಸ್ಥಗಿತಗೊಂಡಿದ್ದ ವಿವಿಧ ರೈಲುಗಳ ಸಂಚಾರ ಡಿ.7ರಂದು ಆರಂಭವಾಗಲಿದೆ. ಹಲವು ರೈಲುಗಳ ಸಂಚಾರಕ್ಕೆ ನೈರುತ್ಯ ರೈಲ್ವೆ ಹಸಿರು ನಿಶಾನೆ ತೋರಿದೆ.
7ರಂದು ಬೆಂಗಳೂರಿಂದ ಹುಬ್ಬಳ್ಳಿ ಕಡೆಗೆ ಮೊದಲು ಸಂಚರಿಸುವ ರೈಲುಗಳು ಮರುದಿನ ಹುಬ್ಬಳ್ಳಿಯಿಂದ ಬೆಂಗಳೂರು ಕಡೆ ತೆರಳಲಿವೆ. ಈ ಹಿಂದಿನಂತೆಯೇ ಆಯಾ ಸ್ಥಳದಲ್ಲಿ ನಿಲುಗಡೆಗಳೂ ಇರಲಿವೆ. ಡಿ.19ರವರೆಗೆ ಪ್ರಾಯೋಗಿಕವಾಗಿ ರೈಲುಗಳು ಓಡಾಡಲಿವೆ. ಆದಾಯ ಸಂಗ್ರಹದ ಆಧಾರದ ಮೇಲೆ ಅವುಗಳ ಮುಂದುವರಿಕೆ ನಿರ್ಧಾರವಾಗಲಿದೆ ಎಂದು ರೈಲ್ವೆ ಬಳಕೆದಾರರ ವೇದಿಕೆ ಸದಸ್ಯ ಕೆ.ವಿನಯ್ಕುಮಾರ್ ತಿಳಿಸಿದ್ದಾರೆ.
ಹಬ್ಬದ ವಿಶೇಷ ಎಂದು ಓಡಾಡುತ್ತಿದ್ದ ರೈಲುಗಳ ಪ್ರಯಾಣದರ ಸಾಮಾನ್ಯಕ್ಕಿಂಕ ಮೂರುಪಟ್ಟು ಹೆಚ್ಚಾಗಿತ್ತು. ಆದರೆ ಈಗ ಮರು ಆರಂಭಗೊಳ್ಳುತ್ತಿರುವ ರೈಲುಗಳ ಪ್ರಯಾಣ ದರ ಮೊದಲಿನಂತೆ ಸಾಮಾನ್ಯವಾಗಿ ಇರಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯಾವ್ಯಾವ ರೈಲು ಸಂಚಾರ?: ಬೆಂಗಳೂರು-ಧಾರವಾಡ (02725)ಇಂಟರ್ಸಿಟಿ ಎಕ್ಸ್ಪ್ರೆಸ್, ಬೆಂಗಳೂರು-ಮಿರಜ್(06589) ರಾಣಿ ಚನ್ನಮ್ಮ ಎಕ್ಸ್ಪ್ರೆಸ್, ಮೈಸೂರು-ತಾಳಗುಪ್ಪ (06227) ಎಕ್ಸ್ಪ್ರೆಸ್, ಬೆಂಗಳೂರು-ತಾಳಗುಪ್ಪ (06529) ಇಂಟರ್ಸಿಟಿ, ಮೈಸೂರು-ಬಾಗಲಕೋಟೆ(07307) ರೈಲುಗಳು ತುಮಕೂರು, ಅರಸೀಕೆರೆ, ಬೀರೂರು ಮಾರ್ಗವಾಗಿ ಸೋಮವಾರ ಸಂಚರಿಸಿ, ಮರುದಿನ ಹಿಂದಿರುಗಲಿವೆ.
ಬೆಂಗಳೂರು- ಹೊಸಪೇಟೆ ನಡುವೆ ಈ ಮೊದಲು ಪ್ರಯಾಣ ಮಾಡುತ್ತಿದ್ದ ಪ್ಯಾಸೆಂಜರ್ (56909) ರೈಲನ್ನು ಎಕ್ಸ್ಪ್ರೆಸ್(06208) ಆಗಿ ಪರಿವರ್ತಿಸಿ ಯಶವಂತಪುರದಿಂದ ರಾತ್ರಿ 8.15ಕ್ಕೆ ಆರಂಭಿಸಲಾಗುವುದು. ಇದೇ ಸಂದರ್ಭ ಯಶವಂತಪುರ-ಹಾಸನ(06203), ಮೈಸೂರು-ಬೆಂಗಳೂರು(06201) ಸೂಪರ್ಫಾಸ್ಟ್ ರೈಲುಗಳೂ ಸಂಚಾರ ಆರಂಭಿಸಲಿವೆ.