ದಾವಣಗೆರೆ: ಜಿಲ್ಲೆಯಲ್ಲಿ ಮತ್ತೆ ಕರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ನಿರ್ಮೂಲನೆಗೆ ಪ್ರಾರ್ಥಿಸಿ ವೀರಶೈವ ಮಹಾಸಭಾದ ಜಿಲ್ಲಾ ಮಹಿಳಾ ಘಟಕದಿಂದ ನಗರದ ಶ್ರೀ ಗುರು ಬಕ್ಕೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಗುರು ಬಕ್ಕೇಶ್ವರ ಸ್ವಾಮಿಗೆ ಪ್ರಾರ್ಥನೆ ಮಾಡಿದ ಬಳಿಕ ಮುತ್ತೈದೆಯರಿಗೆ ಅರಿಶಿಣ, ಕುಂಕುಮ ನೀಡಿ, ಉಡಿ ತುಂಬಲಾಯಿತು.
ಸರ್ಕಾರ ಎಲ್ಲ ರೀತಿಯಲ್ಲೂ ಕ್ರಮ ತೆಗೆದುಕೊಳ್ಳುತ್ತಿದೆ. ಮಕ್ಕಳು, ಯುವಕರು, ಯುವತಿಯರು, ಮಹಿಳೆಯರು ಹಾಗೂ ಪುರುಷರಿಗೂ ಸೋಂಕು ಹರಡುತ್ತಿದೆ. ಒಮಿಕ್ರಾನ್ ಸಹ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವಾರದಿಂದೀಚೆಗೆ ಸೋಂಕು ಜಾಸ್ತಿಯಾಗುತ್ತಿದೆ. ಈ ಹಿಂದೆ ಎರಡು ಅಲೆಯಿಂದಾಗಿ ಜನಜೀವನಕ್ಕೆ ಹೊಡೆತ ಬಿದ್ದಿದೆ. ಈ ಬಾರಿಯೂ ಮತ್ತೆ ಆತಂಕ ಸೃಷ್ಟಿಯಾಗಿದೆ. ಜನರ ಆರೋಗ್ಯ ರಕ್ಷಿಸುವಂತೆ ಪ್ರಾರ್ಥಿಸಲಾಯಿತು.
ಮಹಿಳಾ ಘಟಕದ ಪ್ರಮುಖರಾದ ಶೋಭಾ ಕೊಟ್ರೇಶ್, ದಾಕ್ಷಾಯಿಣಿ, ಮಂಜುಳಾ ಅನು ಅಣಬೂರು ಮಠ, ರಾಜೇಶ್ವರಿ, ಕೊಟ್ರಮ್ಮ, ಅನ್ನಪೂರ್ಣಮ್ಮ, ಶಕುಂತಲಮ್ಮ ಬಸಪ್ಪ ಪಾಲ್ಗೊಂಡಿದ್ದರು.