ಮೀರತ್: ಮಹಿಳೆಯೋರ್ವಳ ವರದಕ್ಷಿಣೆ ಪ್ರಕರಣದ ತನಿಖೆ ನಡೆಸುತ್ತಿದ್ದ ಸಬ್ ಇನ್ಸ್ಪೆಕ್ಟರ್ ಒಬ್ಬ ಆ ನೊಂದ ಮಹಿಳೆಗೇ ಅನುಚಿತ ಸಂದೇಶ ಮತ್ತು ವಿಡಿಯೋ ಕಳುಹಿಸಿದ್ದಾನೆ. ಆರೋಪಗಳು ಬೆಳಕಿಗೆ ಬಂದ ನಂತರ ಎಸ್ಐ ನನ್ನು ಅಮಾನತುಗೊಳಿಸಲಾಗಿದ್ದು, ವರದಕ್ಷಿಣೆ ದೌರ್ಜನ್ಯ ಪ್ರಕರಣದ ತನಿಖೆಯನ್ನು ಸೋಮವಾರ ಮತ್ತೊಬ್ಬ ಅಧಿಕಾರಿಗೆ ಹಸ್ತಾಂತರಿಸಲಾಗಿದೆ.
ವರದಕ್ಷಿಣೆ ದೌರ್ಜನ್ಯಕ್ಕೊಳಗಾದ ಮಹಿಳೆ ಪೊಲೀಸರನ್ನು ಸಂಪರ್ಕಿಸಿದ್ದಳು. ಆ ಪ್ರಕರಣದ ತನಿಖೆಯನ್ನು ಈ ಎಸ್ಐ ನಡೆಸುತ್ತಿದ್ದ. ಸಲುಗೆ ಹೆಚ್ಚಾದಂತೆ ಆ ಮಹಿಳೆಗೆ ಅನುಚಿತ ಸಂದೇಶ, ವೀಡಿಯೋ ಕಳುಹಿಸಲಾರಂಭಿಸಿದ. ಆಕೆಯೊಂದಿಗೆ ಎಸ್ಐ ನಡೆಸಿದ ಸಂಭಾಷಣೆಯ ಸ್ಕ್ರೀನ್ಶಾಟ್ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಇದನ್ನೂ ಓದಿ: ಮರ್ಯಾದಾಗೇಡು ಹತ್ಯೆ ಯತ್ನಕ್ಕೆ ಗ್ರಾಮಸ್ಥರೇ ಹಾಕಿದರು ಬ್ರೇಕ್….!
ಆರೋಪಿ ಪೊಲೀಸ್ನನ್ನು ಅಜಯ್ ಪ್ರಕಾಶ್ ಸಿಂಗ್ ಎಂದು ಗುರುತಿಸಲಾಗಿದೆ. ಆತ ಬುಲಂದ್ಶಹರ್ನಲ್ಲಿ ಪೊಲೀಸ್ ಔಟ್ಪೋಸ್ಟ್ ಉಸ್ತುವಾರಿ ವಹಿಸುತ್ತಿದ್ದ. ತನಿಖೆ ಪ್ರಾರಂಭಿಸಿದಾಗ ಪ್ರಕರಣದ ಬಗ್ಗೆ ತಿಳಿದು ಬಂದಿದೆ ಎಂದು ಬುಲಂದ್ಶಹರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಸಿಂಗ್ ಹೇಳಿದ್ದಾರೆ. ತನಿಖೆಯ ವೇಳೆ ಆರೋಪಿ ಮಹಿಳೆಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿರುವುದು ಪತ್ತೆಯಾಗಿದೆ.
ವೈಯಕ್ತಿಕ ಮೂಲಗಳ ಮೂಲಕ ಪ್ರಕರಣದ ಬಗ್ಗೆ ಮಾಹಿತಿ ಪಡೆಯಲಾಗಿದ್ದು, ಅಧಿಕೃತ ದೂರು ದಾಖಲಾಗದಿದ್ದರೂ ತನಿಖೆಯನ್ನು ಪ್ರಾರಂಭಿಸಿದ್ದಾಗಿ ತಿಳಿಸಿದ್ದಾರೆ.
“ಆರೋಪಿ ಪೊಲೀಸ್ನನ್ನು ಅಮಾನತುಗೊಳಿಸಲಾಗಿದ್ದು, ಆ ಮಹಿಳೆಯ ವರದಕ್ಷಿಣೆ ದೌರ್ಜನ್ಯ ಪ್ರಕರಣದ ತನಿಖೆಗಾಗಿ ಇನ್ನೊಬ್ಬ ಅಧಿಕಾರಿಯನ್ನು ನಿಯೋಜಿಸಲಾಗಿದೆ” ಎಂದು ಅವರು ತಿಳಿಸಿದ್ದಾರೆ.