ಯಲಬುರ್ಗಾ: ಅಕ್ಷರ ದಾಸೋಹ ಕಾರ್ಯಕ್ರಮ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಅಡುಗೆ ಸಿಬ್ಬಂದಿ ಮಕ್ಕಳಿಗೆ ಗುಣಮಟ್ಟದ ಅಡುಗೆ ತಯಾರಿಸಬೇಕು ಎಂದು ತಾಪಂ ಇಒ ಸಂತೋಷ ಬಿರಾದಾರ ಹೇಳಿದರು.
ಇದನ್ನೂ ಓದಿ: ‘ಅನ್ನಪೂರಣಿ’ಯಲ್ಲಿ ಡೂಪ್ ಇಲ್ಲದೆ ಅಡುಗೆ ಮಾಡಿದ ಲೇಡಿ ಸೂಪರ್ಸ್ಟಾರ್ ನಯನತಾರಾ
ಇಲ್ಲಿನ ತಾಪಂ ಸಾಮರ್ಥ್ಯ ಸೌಧದಲ್ಲಿ ತಾಲೂಕು ಅಕ್ಷರ ದಾಸೋಹ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನ ಹಿನ್ನೆಲೆ ಗುರುವಾರ ಹಮ್ಮಿಕೊಂಡಿದ್ದ ಅಡುಗೆದಾರರಿಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಿಗೆ ಅಡುಗೆ ಮಾಡಿ ಉಣಬಡಿಸುವುದು ಪವಿತ್ರವಾದ ಕೆಲಸ. ಅಡುಗೆ ತಯಾರಿಸುವಾಗ ಶುದ್ಧ ಮತ್ತು ಸುರಕ್ಷಿತ ಆಹಾರ ತಯಾರಿಸಿ ಅಚ್ಚುಕಟ್ಟಾಗಿ ವಿತರಿಸಬೇಕು ಎಂದರು.
ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಫ್.ಎಂ.ಕಳ್ಳಿ ಮಾತನಾಡಿ, ಪಿಎಂ ಪೋಷಣ್ ಶಕ್ತಿ ನಿರ್ಮಾಣ ಮಧ್ಯಾಹ್ನ ಉಪಹಾರ ಯೋಜನೆ ರಾಜ್ಯ ಮತ್ತು ಕೇಂದ್ರ ಸರಕಾರದ ಕಾರ್ಯಕ್ರಮವಾಗಿದೆ.
ಈ ಯೋಜನೆಯಡಿ ಎಲ್ಲ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಎಲ್ಕೆಜಿಯಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯ ಯೋಜನೆಯಡಿ ಹಾಲು, ಬಿಸಿಯೂಟ ಮತ್ತು ಪೂರಕ ಪೌಷ್ಟಿಕ ಆಹಾರ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಿಸಲಾಗುವುದು ಎಂದರು.
ದೈಹಿಕ ಶಿಕ್ಷಣ ಪರಿವೀಕ್ಷಕ ವೀರಭದ್ರಪ್ಪ ಅಂಗಡಿ, ಅಕ್ಷರ ದಾಸೋಹ ನೌಕರರ ಸಂಘದ ಕಾರ್ಯದರ್ಶಿ ಶಿವನಗೌಡ, ಸಂಪನ್ಮೂಲ ವ್ಯಕ್ತಿಗಳಾದ ವೀರಪ್ಪ ಗಾಣಿಗೇರ, ಮಂಜುನಾಥಯ್ಯ, ಶರಣಪ್ಪ ಕುರ್ನಾಳ, ದೇವೇಂದ್ರಪ್ಪ ಬಗನಾಳ, ಖಾದರ್ಬಾಷಾ, ತರಬೇತಿಗಾರ ದೇವರಾಜ, ತಾಪಂ ನೌಕರ ಬಸವರಾಜ ಮಾಲಿಪಾಟೀಲ್, ಬಸವರಾಜ ಕರಕನಗೌಡ್ರ, ಶರಣಪ್ಪ ಹಾಳಕೇರಿ ಇತರರಿದ್ದರು.