ತರೀಕೆರೆ: ಸುದೀರ್ಘ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಮೌಲ್ಯ ಮತ್ತು ಮಹತ್ವ ಇಂದಿನ ಯುವ ಪೀಳಿಗೆಗೆ ತಿಳಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದಾನಿ ಶ್ಯಾಮಲಾ ಮಂಜುನಾಥ್ ತಾಲೂಕು ಕಸಾಪಗೆ ಕೊಡುಗೆಯಾಗಿ ನೀಡಿದ ನಿವೇಶನದ ನೋಂದಣಿ ಪತ್ರ ಸ್ವೀಕರಿಸಿ ಮಾತನಾಡಿದರು.
ಭಾಷೆಯ ಬೆಳವಣಿಗೆಯಾದಾಗ ಸಂಸ್ಕೃತಿಯ ಅಡಿಪಾಯ ಬಲವಾಗಲಿದೆ. ಭಾಷಾಭಿಮಾನಿಗಳು ಮಾತ್ರವಲ್ಲ, ದಾನಿಗಳು ಸ್ವಂತ ಇಚ್ಛೆಯಿಂದ ಮುಂದೆ ಬಂದರೆ ಭಾಷೆಯ ಬೆಳವಣಿಗೆ ಜತೆ ಅಸ್ತಿತ್ವ ಉಳಿಯಲಿದೆ. ದಾನಿ ಶ್ಯಾಮಲಾ ಮಂಜುನಾಥ್ ಕಸಾಪಗೆ 18 ಲಕ್ಷ ರೂ. ಮೌಲ್ಯದ ಸ್ವತ್ತು ಕೊಡುಗೆಯಾಗಿ ನೀಡಿರುವುದು ರಾಜ್ಯದಲ್ಲಿ ಇದೇ ಮೊದಲು. ಕನ್ನಡತನಕ್ಕೆ ಅವರು ತೋರಿರುವ ಉದಾರತೆ ಇತರರಿಗೆ ಪ್ರೇರಣೆಯಾಗಲಿದೆ ಎಂದರು.
ನಿವೇಶನ ದಾನ ನೀಡುವ ಅಭಿಯಾನಕ್ಕೆ ಇಲ್ಲಿಂದ ಚಾಲನೆ ಸಿಕ್ಕಂತಾಗಿದೆ. ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ಗೆ ನಿವೇಶನ ದಾನ ಮಾಡುವವರಿಗೆ ನೋಂದಣಿ ಶುಲ್ಕದಲ್ಲಿ ವಿನಾಯಿತಿ ಕಲ್ಪಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಯುವ ಬರಹಗಾರರಿಗೆ ಉತ್ತೇಜನ ನೀಡುವಂತಹ ಹಲವು ಕಾರ್ಯಕ್ರಮ ಕಸಾಪದಿಂದ ಆಗಾಗ ಆಯೋಜಿಸಲಾಗುತ್ತಿದೆ. ಮುಂದಿನ ಜಿಲ್ಲಾ ಸಾಹಿತ್ಯ ಸಮ್ಮೇಳನ ರಂಗೇನಹಳ್ಳಿಯಲ್ಲಿ ಆಯೋಜಿಸಲು ಬೇಕಾದ ಯೋಜನೆ ರೂಪಿಸಲಾಗುವುದು ಎಂದರು.
ಕಸಾಪಗೆ ನಿವೇಶನ ದಾನ ನೀಡಿದ ಶ್ಯಾಮಲಾ ಮಂಜುನಾಥ್ ಹಾಗೂ ಅವರ ಪುತ್ರ ನವೀನ್ ಅವರನ್ನು ಡಾ. ಮಹೇಶ ಜೋಶಿ ಅಭಿನಂದಿಸಿದರು. ಕಸಾಪ ಜಿಲ್ಲಾ ಸಂಚಾಲಕ ಇಮ್ರಾನ್ ಅಹಮದ್ ಬೇಗ್, ತಾಲೂಕು ಕಸಾಪ ಅಧ್ಯಕ್ಷ ನವೀನ್ ಪೆನ್ನಯ್ಯ, ಗೌರವಾಧ್ಯಕ್ಷ ಬಿ.ಎಸ್.ಭಗವಾನ್, ಕಾರ್ಯದರ್ಶಿಗಳಾದ ಮಿಲ್ಟ್ರಿ ಶ್ರೀನಿವಾಸ್, ತ.ಮ.ದೇವಾನಂದ್, ಕೋಶಾಧ್ಯಕ್ಷ ಟಿ.ಸಿ.ದರ್ಶನ್, ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ, ಪ್ರಮುಖರಾದ ಡಾ. ಮರಳಸಿದ್ದಯ್ಯ ಪಟೇಲ್, ಕೆ.ಎಸ್.ಶಿವಣ್ಣ, ಎ.ದಾದಾಪೀರ್, ಎಂ.ಎಸ್.ವಿಶಾಲಾಕ್ಷಮ್ಮ, ಎಸ್.ಟಿ.ತಿಪ್ಪೇಶಪ್ಪ ಮತ್ತಿತರರಿದ್ದರು.