ಮಂಗಳೂರು: ನಗರದ ಸಿಸಿಬಿ ಪೊಲೀಸರು ವಂಚನಾ ಜಾಲದ ಆರೋಪಿಗಳಿಗೆ ಸೇರಿದ ಐಷಾರಾಮಿ ಕಾರು ಮಾರಾಟ ಮಾಡಿದ್ದಾರೆನ್ನಲಾದ ಪ್ರಕರಣದ ತನಿಖೆ ಸಿಐಡಿ ನಡೆಸುತ್ತಿದ್ದು, ಆರೋಪಕ್ಕೊಳಗಾಗಿರುವ ಅಧಿಕಾರಿಯೊಬ್ಬರು ವಿಚಾರಣೆ ನಡೆಸುತ್ತಿರುವ ಸಿಐಡಿ ಅಧಿಕಾರಿಯೊಬ್ಬರ ಜತೆ ಮೊಬೈಲ್ನಲ್ಲಿ ಮಾತುಕತೆ ನಡೆಸಿರುವುದು ಬಹಿರಂಗವಾಗಿದೆ.
ಕಾರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಾರ್ಕೊಟಿಕ್ ಆ್ಯಂಡ್ ಇಕಾನಾಮಿಕ್ ಠಾಣಾ ಇನ್ಸ್ಪೆಕ್ಟರ್ ರಾಮಕೃಷ್ಣ, ಸಿಸಿಬಿ ಸಬ್ಇನ್ಸ್ಪೆಕ್ಟರ್ ಆಗಿದ್ದ ಕಬ್ಬಾಳ್ರಾಜ್, ಹೆಡ್ ಕಾನ್ಸ್ಟೆಬಲ್ ಆಶಿತ್ ಡಿಸೋಜ, ರಾಜ ಎಂಬವರನ್ನು ಅಮಾನತು ಮಾಡಲಾಗಿದೆ. ಈ ಪ್ರಕರಣದ ತನಿಖೆ ಸಿಐಡಿಗೆ ಹೋದ ಬಳಿಕ ನಾಲ್ವರು ಆರೋಪಿಗಳಲ್ಲಿ ಒಬ್ಬಾತ ಸಿಐಡಿ ಅಧಿಕಾರಿಯೊಬ್ಬರಿಗೆ ಕರೆ ಮಾಡಿ ಮಾತನಾಡಿರುವುದು ಪತ್ತೆಯಾಗಿದೆ. ‘ಮಾಧ್ಯಮದಲ್ಲಿ ವರದಿ ಬಂದಿರುವುದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ’ ಎಂದು ಮಾತುಕತೆ ಸಂದರ್ಭ ಸಿಐಡಿ ಅಧಿಕಾರಿ ಭರವಸೆ ಮಾತುಗಳನ್ನಾಡಿದ್ದಾರೆ ಎಂದೂ ತಿಳಿದುಬಂದಿದೆ. ೆನ್ನಲ್ಲಿ ಆರೋಪಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ವಿಷಯ ಗೃಹ ಇಲಾಖೆ, ಸಿಐಡಿ ಹಿರಿಯ ಅಧಿಕಾರಿಗಳ ಗಮನಕ್ಕೂ ಬಂದಿದೆ ಎಂಬ ಮಾಹಿತಿ ಇದೆ.
ಮಹಿಳೆಯಿಂದಲೂ ಸುಲಿಗೆ: ನಗರ ಸಿಸಿಬಿ ಪೊಲೀಸರ ಕಾರು ಮಾರಾಟ ವಂಚನೆ ಪ್ರಕರಣ ಹೊರಬಿದ್ದ ಒಂದರ ಹಿಂದೆ ಒಂದು ಪ್ರಕರಣಗಳು ಸುದ್ದಿಯಾಗುತ್ತಿದ್ದು, ಮತ್ತಷ್ಟು ಸಂಚಲನ ಮೂಡಿಸುತ್ತಿದೆ. ಇದೇ ಮಾದರಿಯಲ್ಲಿ 2019ರಲ್ಲಿ ವೀಣಾ ಎಂಬವರ ಹಾಲಿನ ಡೈರಿಗೆ ನುಗ್ಗಿ 86 ಸಾವಿರ ರೂ. ಸುಲಿಗೆ ಮಾಡಿರುವ ಬಗ್ಗೆ ಆರೋಪ ವ್ಯಕ್ತವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.