ಶಿವಮೊಗ್ಗ: ಮುಂಗಡ ಬುಕ್ಕಿಂಗ್ ಮಾಡಿದರೂ ನಿಗದಿತ ಸಮಯಕ್ಕೆ ಕಾರು ಡೆಲೆವರಿ ನೀಡದೇ, ಬುಕ್ಕಿಂಗ್ ಹಣ ಮರಳಿಸದೇ ಸತಾಯಿಸಿದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಪರಿಹಾರ ನೀಡುವಂತೆ ಕಾರು ಸಂಸ್ಥೆಗೆ ಆದೇಶಿಸಿದೆ.
ನಗರದ ವೈ.ಎಲ್.ರವಿಕುಮಾರ್ ಎಂಬುವರು ಶಿವಮೊಗ್ಗದ ಪ್ರತಿಷ್ಠಿತ ಕಾರು ಶೋರೂಮ್ನಲ್ಲಿ ಸ್ಕಾರ್ಪಿಯೋ ಎನ್ಝಡ್ 6 ಡಿಸೇಲ್ ಎಂಟಿ ಬಿಳಿ ಬಣ್ಣದ ಮಾದರಿಯ ಕಾರ್ ಅನ್ನು 21 ಸಾವಿರ ರೂ. ಪಾವತಿಸಿ 2023ರ ಆ.6ರಂದು ಮುಂಗಡ ಬುಕ್ಕಿಂಗ್ ಮಾಡಿದ್ದರು. ಆದರೆ ಉತ್ಪಾದನಾ ಘಟಕದಲ್ಲಿ ತೊಂದರೆ ಉಂಟಾಗಿದೆ ಎಂದು ಕಾರಣ ನೀಡಿ ಸಂಸ್ಥೆಯು ಕಾರು ನೀಡಿರಲಿಲ್ಲ. ಮುಂಗಡ ಹಣವನ್ನೂ ಮರಳಿಸಿರಲಿಲ್ಲ.
ಈ ಕುರಿತು ಆಯೋಗದ ಮುಂದೆ ಸೂಕ್ತ ಪರಿಹಾರ ಕೋರಿ ರವಿಕುಮಾರ್ ಅವರು ಪ್ರಕರಣ ದಾಖಲಿಸಿದ್ದು, ಆಯೋಗದಿಂದ ಜಾರಿಗೊಳಿಸಿದ ನೋಟಿಸ್ಗೆ ಎದುರುದಾರರು ಕಲಾಪಕ್ಕೆ ಹಾಜರಾಗಿರದ ಕಾರಣ ಏಕಪಕ್ಷೀಯವಾಗಿ ಆದೇಶಿಸಲಾಗಿದೆ. ಪ್ರಕರಣದ ಅಂಶಗಳು ಮತ್ತು ಅರ್ಜಿದಾರರು ಹಾಜರುಪಡಿಸಿದ ದಾಖಲೆಗಳನ್ನು ಪರಿಗಣಿಸಿ, ಪರಿಶೀಲಿಸಿದಾಗ ಎದುರುದಾರರ ಸೇವಾನ್ಯೂನ್ಯತೆ ಕಂಡುಬಂದಿದ್ದು ಪ್ರಸ್ತುತ ಪ್ರಕರಣವನ್ನು ಭಾಗಶಃ ಪುರಸ್ಕರಿಸಲಾಗಿದೆ.
ಎದುರುದಾರರು ದೂರುದಾರರಿಂದ ಪಡೆದ ಮುಂಗಡ ಹಣ 21 ಸಾವಿರ ರೂ.ಗಳನ್ನು ಶೇ.9 ಬಡ್ಡಿ ಸಮೇತ ಪಾವತಿಸಲು ಮತ್ತು 10 ಸಾವಿರ ರೂ. ಅನ್ನು ಮಾನಸಿಕ ಹಿಂಸೆ ಹಾಗೂ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಪರಿಹಾರವಾಗಿ ಹಾಗೂ ವ್ಯಾಜ್ಯದ ಖರ್ಚು ವೆಚ್ಚಗಳ ಬಾಬ್ತು 10 ಸಾವಿರ ರೂ. ಪಾವತಿಸಬೇಕೆಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ. ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟಿ ಮತ್ತು ಬಿ.ಡಿ.ಯೋಗಾನಂದ ಅವರು ಪೀಠವು ಆದೇಶಿಸಿದೆ.