ಬೈಲಕುಪ್ಪೆ: ಎಲ್ಲ ವರ್ಗದ ಜನರು ಆತ್ಮ ಗೌರವದಿಂದ ಬದುಕಲು ಸಂವಿಧಾನ ಕಾರಣವಾಗಿದೆ ಎಂದು ತಹಸೀಲ್ದಾರ್ ಕುಂಞ ಅಹಮದ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ನವಿಲೂರು ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸಿರುವ ಏಕೈಕ ಗ್ರಂಥ ಎಂದರೆ ಸಂವಿಧಾನ. ಇದು ಯಾವುದೇ ಒಂದು ಧರ್ಮ ಜಾತಿಗೆ ಸೀಮಿತವಾಗಿಲ್ಲ. ಭಾರತೀಯರು ಆತ್ಮಗೌರವದಿಂದ ಬದುಕಲು ಸಂವಿಧಾನ ಕಾರಣವಾಗಿದೆ ಎಂದರು.
ಸಮಾಜ ಕಲ್ಯಾಣ ಅಧಿಕಾರಿ ಚಂದ್ರಶೇಖರ್ ಮಾತನಾಡಿ, ನಾವು ಸಂವಿಧಾನವನ್ನು ಅರ್ಥೈಸಿಕೊಂಡು ಅದನ್ನು ಅಳವಡಿಸಿಕೊಂಡರೆ ಮಾತ್ರ ನಮ್ಮ ಜೀವನ ಉತ್ತಮವಾಗುತ್ತದೆ. ನಮ್ಮ ಸಂವಿಧಾನವು ಎಲ್ಲ ಕಾಲದಲ್ಲಿ ಎಲ್ಲರಿಗೂ ಸರಿಹೊಂದುವ ಸಂವಿಧಾನವಾಗಿದೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಗ್ರಾಮಕ್ಕೆ ಬಂದ ಜಾಗೃತಿ ರಥವನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ನವಿಲೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಸರೋಜಮ್ಮ, ಮುಖಂಡರಾದ ಮಹದೇವ್. ಚೆನ್ನಪ್ಪ, ರಾಜು, ಅಣ್ಣಯ್ಯ, ಪ್ರಕಾಶ್, ಪಿಡಿಒ ರವಿ, ಮುಖ್ಯಶಿಕ್ಷಕ ಯುವರಾಜ್, ಗ್ರಾಮಸ್ಥರಾದ ಶಿವಣ್ಣ, ಶೇಖರ್, ಹರೀಶ್, .ರಜಿನಿ .ಸೇರಿದಂತೆ ಮತ್ತಿತರರು ಇದ್ದರು.