ಗುಂಡ್ಲುಪೇಟೆ: ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂವಿಧಾನ ಜಾಗೃತಿ ಮೂಡಿಸಲಾಗುವುದು ಎಂದು ಶಾಸಕ ಎಚ್.ಎಂ.ಗಣೇಶ ಪ್ರಸಾದ್ ಹೇಳಿದರು.
ಭಾನುವಾರ ತಾಲೂಕಿನ ತೆರಕಣಾಂಬಿ ಹುಂಡಿ ಗ್ರಾಮದ ಸಂಗನಬಸವೇಶ್ವರ ದೇವಾಲಯದ ಬಳಿ ಆಗಮಿಸಿದ ಸಂವಿಧಾನ ಜಾಗೃತಿ ರಥವನ್ನು ಸ್ವಾಗತಿಸಿ ಅವರು ಮಾತನಾಡಿ, ಸಂವಿಧಾನ ಜಾರಿಯಾದ 75ನೇ ವರ್ಷದ ಪ್ರಯುಕ್ತ ರಾಜ್ಯ ಸರ್ಕಾರ ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಮೂಡಿಸುತ್ತಿದೆ. ಈ ಅಂಗವಾಗಿ ತಾಲೂಕಿಗೆ ಆಗಮಿಸಿದ ರಥ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಲಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಿ.ಮಹದೇವಪ್ಪ, ಮಾಜಿ ಸದಸ್ಯ ಕೆ.ಎಸ್. ಮಹೇಶ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ, ತೆರಕಣಾಂಬಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹದೇವಸ್ವಾಮಿ, ಮುಖಂಡರಾದ ಸುಭಾಷ್ ಮಾಡ್ರಹಳ್ಳಿ, ಸೋಮಣ್ಣ, ಲಕ್ಕೂರು ಗಿರೀಶ್ ಸೇರಿದಂತೆ ಹಲವರು ಇದ್ದರು.