ಕೆ.ಆರ್.ಪೇಟೆ: ತಾಲೂಕಿನ ಶೀಳನೆರೆ ಹೋಬಳಿಯ ಸಿಂಧಘಟ್ಟ ಗ್ರಾಮದ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿ ಅಮ್ಮನವರ ದೇವಾಲಯ ಜೀರ್ಣೋದ್ಧಾರ ಹಾಗೂ ನೂತನ ಕಳಶ ಪ್ರತಿಷ್ಠಾಪನಾ ಕಾರ್ಯ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.
ಶನಿವಾರದಿಂದ ಆರಂಭವಾದ ದೇವಾಲಯ ಜೀರ್ಣೋದ್ಧಾರ ಪೂಜಾ ಕಾರ್ಯಕ್ರಮಗಳಾದ ತೀರ್ಥಾನಯನ, ಗಣಪತಿ ಹೋಮ, ಪೂಜೆ, ಪುಣ್ಯಾಹ, ನಾಂದಿ, ಆಚಾರ್ಯಾದಿ ಋತ್ವಿಕ್ ವರ್ಣ, ಮಂಟಪಪ್ರತಿಷ್ಠೆ, ಜಲಾಧಿವಾಸ, ರಕ್ಷಾಬಂಧನ, ಕಲಶ ಪ್ರತಿಷ್ಠಾಪನೆ, ನವಗ್ರಹ ಹೋಮ, ವಾಸ್ತುಹೋಮ, ಪ್ರಥಮ ಪರ್ಯಾಯ ಹೋಮ, ತೈಲಮಾರ್ಜನೆ, ದಿವ್ಯಾಧಿವಾಸ ಮಹಾಮಂಗಳಾರತಿ, ರಕ್ಷೋಕ್ಕ ಹೋಮ ಮಂತ್ರಪಾರಾಯಣ, ಲಲಿತಾಸಹಸ್ರನಾಮ ಪೂಜೆ, ಚಂಡಿಕಾ ಹೋಮ, ಸುವಾಸಿನೀ ಪೂಜೆ, ಕುಮಾರಿಪೂಜೆ, ರುದ್ರಮಂಡಲ ರಚನೆ, ನೇತ್ರೋನ್ಕಿಲನ, ಶಯ್ಯಧಿವಾಸ, ಗರ್ಭಾಗಾರ ಪ್ರವೇಶ, ಅಷ್ಟಬಂಧನ, ಕಾರ್ಯಕ್ರಮಗಳು ನಡೆದವು.
ಸೋಮವಾರ ಆದಿಚುಂಚನಗಿರಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಬೇಬಿಮಠದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ತೆಂಡೇಕೆರೆ ಬಾಳೆಹೊನ್ನೂರು ಶಾಖಾಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಉತ್ತರಾಂಗ ಹೋಮ, ಪ್ರಾಣಪ್ರತಿಷ್ಠೆ, ಮಹಾಭಿಷೇಕ, ರಂಭಾಸ್ಥಂಭ, ಛೇದನ, ಕೂಷ್ಮಾಂಡಬಲಿ, ಪೂರ್ಣಾಹುತಿ, ಪ್ರಸಾರ ಕಲಶ ಪ್ರತಿಷ್ಠಾಪನೆ ಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನೆರವೇರಿದವು.
ಭಕ್ತರಿಗೆ ಸುಖ-ಶಾಂತಿ ಕರುಣಿಸಲಿ: ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಎಚ್.ಟಿ.ಮಂಜು ಮಾತನಾಡಿ, ಹಲವಾರು ವರ್ಷಗಳಿಂದ ದೇವಾಲಯ ಜೀರ್ಣೋದ್ಧಾರ ಕೆಲಸಕ್ಕೆ ಸಿಂಧಘಟ್ಟ ಗ್ರಾಮಸ್ಥರು ಹಾಗೂ ಶ್ರೀ ಲಕ್ಷ್ಮೀದೇವಿ ಅಮ್ಮನವರ ದೇವರ ಒಕ್ಕಲಿನವರ ಮತ್ತು ಸರ್ಕಾರ ಹಾಗೂ ದಾನಿಗಳ ಶ್ರಮದಿಂದ ತಾಯಿ ಲಕ್ಷ್ಮೀದೇವಿ ಇಲ್ಲಿ ನೆಲೆಸಿದ್ದಾಳೆ. ಈ ದಿನಕ್ಕಾಗಿ ಹಗಲಿರುಳು ಶ್ರಮಿಸಿದ ದೇವಸ್ಥಾನ ಜೀರ್ಣೋದ್ದಾರ ಸಮಿತಿಯ ಎಲ್ಲ ಸದಸ್ಯರಿಗೆ ಅಭಿನಂದನೆಗಳು. ತಾಯಿ ಲಕ್ಷ್ಮೀದೇವಿ ಕಾಲಕಾಲಕ್ಕೆ ಮಳೆ, ಬೆಳೆ ಕರುಣಿಸಿ ತನ್ನ ಭಕ್ತರನ್ನು ಸಂಕಷ್ಟದಿಂದ ದೂರಮಾಡಿ ಸುಖ-ಶಾಂತಿ, ನೆಮ್ಮದಿಯಿಂದ ಸಾಮರಸ್ಯದ ಜೀವನ ನಡೆಸಲು ಎಲ್ಲರಿಗೂ ಪ್ರೇರಣೆ ನೀಡಲಿ ಎಂದು ಶುಭ ಕೋರಿದರು.
ಪೂಜಾ ಕಾರ್ಯಕ್ರಮಕ್ಕೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಕೆ.ಸಿ.ನಾರಾಯಣಗೌಡ, ಎಂಡಿಸಿಸಿ ಬ್ಯಾಂಕ್ ಉಪಾದ್ಯಕ್ಷ ಎಚ್.ಕೆ.ಅಶೋಕ್, ಆರ್ಟಿಒ ಅಧಿಕಾರಿ ಮಲ್ಲಿಕಾರ್ಜುನ್, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಅಂಬರೀಷ್, ಸಿಂಧಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಿವ್ಯಾ ಗಿರೀಶ್, ದೇವಾಲಯ ಜೀರ್ಣೋದ್ಧಾರ ಸಮಿತಿ ಸದಸ್ಯಾರದ ಎಸ್.ಎನ್.ರವಿ, ಕುಮಾರಸ್ವಾಮಿ, ಪೊಲೀಸ್ ವಿಶ್ವನಾಥ್ ಸೇರಿದಂತೆ ವಿವಿಧ ತಾಲೂಕು, ಜಿಲ್ಲೆಗಳಿಂದ ಆಗಮಿಸಿದ್ದ ದೇವರ ಒಕ್ಕಲಿನ ಸಾವಿರಾರು ಭಕ್ತರು ಹಾಜರಿದ್ದರು.
ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ಸಿಂಧಘಟ್ಟ ಗ್ರಾಮದ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿ ಅಮ್ಮನವರ ದೇವಾಲಯ ಜೀರ್ಣೋದ್ಧಾರ ಹಾಗೂ ನೂತನ ಕಳಶ ಪ್ರತಿಷ್ಠಾಪನಾ ಕಾರ್ಯ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ-ಸಂಭ್ರಮದಿಂದ ನಡೆಯಿತು.