ಬೆಂಗಳೂರು: ಬಿಜೆಪಿಗೆ ಅಶ್ವಥ್ ನಾರಾಯಣ ಹೇಳಿಕೆ ದುಬಾರಿಯಾಗಿದ್ದು ಇದನ್ನೆ ಕಾಂಗ್ರೆಸ್ ಅಸ್ತ್ರ ಮಾಡಿಕೊಂಡಿದೆ. ಸದ್ಯ ಸದನದ ಒಳಗೂ, ಹೊರಗೂ ಅಶ್ವಥ್ ನಾರಾಯಣ ವಿರುದ್ದ ಕಾಂಗ್ರೆಸ್ ವಾಗ್ದಾಳಿ ನಡೆಸುತ್ತಿದ್ದಾರೆ.
ಬೆಳಗ್ಗೆ ಪ್ರೆಸ್ ಮೀಟ್ ಮಾಡಿ ವಾಗ್ದಾಳಿ ಮಾಡಿದ್ದ ಕಾಂಗ್ರೆಸ್ ಈಗ ಸದನದಲ್ಲಿ ಟಿಪ್ಪು ಹೇಳಿಕೆ ಪ್ರಸ್ತಾಪ ಮಾಡಿದೆ. ತಮ್ಮ ಮಾತಿಗೆ ಅಶ್ವಥ್ ನಾರಾಯಣ ವಿಷಾದ ವ್ಯಕ್ತಪಡಿಸಿದ್ದರೂ ಕಾಂಗ್ರೆಸ್ ಸದಸ್ಯರು ಸಮ್ಮನಾಗುತ್ತಿಲ್ಲ. ಅಶ್ವಥ್ ನಾರಾಯಣ ವಿರುದ್ಧ ಸಮೋಟೊ ಕೇಸ್ ದಾಖಲಿಸುವಂತೆ ಕಾಂಗ್ರೆಸ್ ಸದಸ್ಯರು ಒತ್ತಾಯ ಮಾಡುತ್ತಿದ್ದು ಸದನದ ಬಾವಿಗಿಳಿದ ಹೋರಾಟ ಮಾಡುತ್ತಿದದ್ದಾರೆ.
ಸಿದ್ದರಾಮಯ್ಯ ಕುರಿತಾಗಿ ಸಚಿವ ಅಶ್ವತ್ಥ ನಾರಾಯಣ ವಿವಾದಾತ್ಮಕ ಹೇಳಿಕೆ ವಿಚಾರ ಶೂನ್ಯ ವೇಳೆಯಲ್ಲಿ ವಿಪಕ್ಷ ಉಪ ನಾಯಕ ಯು.ಟಿ ಖಾದರ್ ಪ್ರಸ್ತಾಪ ಮಾಡಿದ್ದಾರೆ. ‘ಕಳೆದ ಒಂದು ತಿಂಗಳಿಂದ ದ್ವೇಷ ಭಾಷಣ ಮಾಡಲಾಗುತ್ತಿದೆ ಉಳ್ಳಾಲ, ತುಮಕೂರಿನಲ್ಲಿ ಮಾತನಾಡಿದ್ದಾರೆ ಇದಕ್ಕೆ ಅಂತ್ಯ ಕಾಣಬೇಕು’ ಎಂದು ಆಗ್ರಹಿಸಿದ್ದಾರೆ.
‘ಸಚಿವ ಅಶ್ವತ್ಥ ನಾರಾಯಣ ಡಾಕ್ಟರ್ ಕಲಿತಿದ್ದಾರೆ. ದೇಶದಲ್ಲಿ ಕಲಿತವರ ಸಮಸ್ಯೆ ಜಾಸ್ತಿ, ಕಳಿಯದಿದ್ದವರದ್ದಲ್ಲ. ಅಶ್ವತ್ಥ್ ನಾರಾಯಣ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ ಮೀರ್ ಸಾದಿಕ್ ವಂಶಸ್ಥರು ತುಂಬಾ ಜನ ಇದ್ದಾರೆ. ಸಚಿವರು ಚುನಾವಣೆಯಲ್ಲಿ ನೇರ ನೇರ ಫೈಟ್ ಮಾಡಲ್ಲ. ಹಿಂದಿನಿಂದ ಜನರನ್ನು ಪ್ರಚೋದನೆ ಮಾಡುತ್ತಾರೆ. ಸಚಿವರಾಗಿ ಈ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ. ಇತಿಹಾಸ ಗೊತ್ತಿಲ್ಲ ಎಂದು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಅವರು ಮಾಡಬಾರದು. ದ್ವೇಷ ಭಾಷಣದ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲು ಮಾಡಬೇಕು ಎಂದಿದೆ. ಹೀಗಿರುವಾಗ ಈ ಕಾನೂನು ಜಾರಿಯಾಗಬೇಕು, ಸ್ವಯಂಪ್ರೇರಿತ ಕೇಸ್ ದಾಖಲು ಮಾಡಬೇಕು. ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಖಾದರ್ ಆಗ್ರಹಿಸಿದ್ದಾರೆ.
ಈ ವೇಳೆ ಅಶ್ವಥ್ ನಾರಾಯಣ ಮೇಲೆ ಮುಗಿಬಿದ್ದ ಕೈ ಶಾಸಕರು ಅಶ್ವಥ್ ನಾರಾಯಣಗೆ ಉತ್ತರ ಹೇಳಲು ಬಿಡದೆ ಆಕ್ಷೇಪ ಮಾಡಿದ್ದಾರೆ. ಈ ವೇಳೆ ತಮ್ಮ ಹೇಳಿಕೆ ಸಮರ್ಥನೆ ಮಾಡಿಕೊಂಡ ಅಶ್ವಥ್ ನಾರಾಯಣ ವಿಷಾದ ವ್ಯಕ್ತಪಡಿಸಿದರು. ಇದೀಗ ಕಾಂಗ್ರೆಸ್ ಶಾಸಕರು ಸಚಿವ ಅಶ್ವತ್ಥ್ ನಾರಾಯಣ ಮೇಲೆ ಸಿಟ್ಟಾಗಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ ಮೇಲೆ ಸ್ಪೀಕರ್ ಕಾಗೇರಿ ಗರಂ ಆಗಿದ್ದು ‘ಯಾರ್ರೀ ನಿಮ್ಮನ್ನು ಆಯ್ಕೆ ಮಾಡಿದವರು. ನಿಮ್ಮನ್ನು ಸದನದಿಂದ ಹೊರಗೆ ಹಾಕಬೇಕಾಗುತ್ತೆ’ ಎಂದು ಎಚ್ಚರಿಕೆ ನೀಡಿದರು. ಅಂತೂ ಆಡಿದ ಮಾತು, ಒಡೆದ ಮುತ್ತು ಎರಡೂ ಹೋದದ್ದೇ. ಹೀಗೆ ಸಚಿವ ಅಶ್ವತ್ಥ್ ನಾರಾಯಣ ನೀಡಿದ ಹೇಳಿಕೆ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದೇ ಹೇಳಬಹುದು.