ನವದೆಹಲಿ: ದೆಹಲಿಯ ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ ಅರವಿಂದ್ ಕೇಜ್ರಿವಾಲ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಮಧ್ಯೆಯೇ ಒಳಜಗಳ ಶುರುವಾಗಿದೆ.
ಅರವಿಂದ್ ಕೇಜ್ರಿವಾಲ್ ಅವರನ್ನು ಹೊಗಳಿದ್ದ ಮುಂಬೈ ಕಾಂಗ್ರೆಸ್ ಮುಖಂಡ ಮಿಲಿಂದ್ ದಿಯೋರಾ ಅವರ ವಿರುದ್ಧ ಇನ್ನೋರ್ವ ನಾಯಕ ದೆಹಲಿಯ ಅಜಯ್ ಮಾಕೆನ್ ಅವರು ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಸರ್ಕಾರ ಆದಾಯವನ್ನು ದ್ವಿಗುಣಗೊಳಿಸಿ, 60,000 ಕೋಟಿ ರೂಪಾಯಿಗೆ ತಲುಪಿಸಿದೆ ಮತ್ತು ಕಳೆದ ಐದು ವರ್ಷಗಳಲ್ಲಿ ಈ ಹೆಚ್ಚುವರಿ ಆದಾಯದ ಸಮತೋಲನವನ್ನು ಕಾಯ್ದುಕೊಂಡಿದೆ. ಇದು ತುಂಬ ಕಡಿಮೆ ಜನರಿಗೆ ಗೊತ್ತಿರುವ ಮತ್ತು ಸ್ವಾಗತಾರ್ಹ ಬೆಳವಣಿಗೆ. ದೆಹಲಿ ಭಾರತದಲ್ಲಿಯೇ ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ದೂರದೃಷ್ಟಿ ಮತ್ತು ಸಬಲವಾಗಿರುವ ಸರ್ಕಾರ ಎಂದು ಮಿಲಿಂದ್ ದಿಯೋರ್ ಹೊಗಳಿದ್ದಾರೆ.
ಆದರೆ ಇದು ಮಾಕೆನ್ ಅವರ ಕೋಪಕ್ಕೆ ಕಾರಣವಾಗಿದೆ. ಮಿಲಿಂದ್ ದಿಯೋರ್ ವಿರುದ್ಧ ಟ್ವೀಟ್ ಮಾಡಿದ ಅಜಯ್ ಮಾಕೆನ್, ಸಹೋದರನೇ ನಿಮಗೇನಾದರೂ ಕಾಂಗ್ರೆಸ್ ಬಿಡಬೇಕು ಎಂದು ಅನ್ನಿಸುತ್ತಿದ್ದರೆ ದಯವಿಟ್ಟು ಬಿಟ್ಟು ಹೋಗಿ. ನಂತರ ಅರ್ಧಂಬರ್ಧ ಸತ್ಯವನ್ನು ಪ್ರಚಾರ ಮಾಡಿಕೊಂಡಿರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
1997-98-ರಲ್ಲಿ ಆದಾಯ 4,073 ಕೋಟಿ ರೂ., 2013-14 -37,459 ಕೋಟಿ ರೂ. ಇತ್ತು. ಅಂದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಂಯುಕ್ತ ವಾರ್ಷಿಕ ಬೆಳವಣಿಗೆ ದರ(ಸಿಎಜಿಆರ್) ಶೇ.14. 87 ಇತ್ತು.
2105-16ರಲ್ಲಿ ಆದಾಯ 41,129 ಕೋಟಿ ರೂ., 2019-20ರಲ್ಲಿ 60,000 ಕೋಟಿ ರೂ. ಆಗಿದೆ. ಅಂದರೆ ಆಪ್ ಸರ್ಕಾರದ ಅವಧಿಯಲ್ಲಿ ಸಂಯುಕ್ತ ವಾರ್ಷಿಕ ಬೆಳವಣಿಗೆ ದರ(ಸಿಎಜಿಆರ್) ಶೇ.9.90ರಷ್ಟಿದೆ ಎಂದು ಮಾಕೆನ್ ತಮ್ಮ ಟ್ವೀಟ್ನಲ್ಲಿ ಲೆಕ್ಕಾಚಾರ ಕೊಟ್ಟಿದ್ದಾರೆ. ಈ ಮೂಲಕ ಆಪ್ ಅವಧಿಯಲ್ಲಿ ಆದಾಯ ದ್ವಿಗುಣಗೊಂಡಿಲ್ಲ ಎಂಬುದನ್ನು ಹೇಳಿದ್ದಾರೆ.
ಹಾಗೇ ದೆಹಲಿ ಕಾಂಗ್ರೆಸ್ ನಾಯಕಿ ರಾಧಿಕಾ ಖೇರಾ ಕೂಡ ಮಿಲಿಂದ್ ದಿಯೋರ್ ಟ್ವೀಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ತುಂಬ ಚಿಕ್ಕವಳು. ಆದರೆ ನಮ್ಮ ಪಕ್ಷದ ಹಿರಿಯರಿಂದ ಇಂತಹ ಮಾತುಗಳನ್ನು ಕೇಳಿ ನನಗೆ ನಿರಾಸೆಯಾಗಿದೆ. ನಮ್ಮ ಪಕ್ಷವನ್ನು ಪ್ರೋತ್ಸಾಹಿಸುವ ಬದಲು ಆಪ್ಗೆ ಬೆಂಬಲ ನೀಡುತ್ತಿದ್ದಾರೆ. ದೆಹಲಿ ಆರ್ಥಿಕತೆ ಶೀಲಾ ಜೀ ಅವರ ಆಡಳಿತದಲ್ಲಿಯೇ ಉತ್ತುಂಗಕ್ಕೆ ಏರಿದೆ ಎಂದು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಗೂ ಮೊದಲು ಅರವಿಂದ ಕೇಜ್ರಿವಾಲ್ ಅವರು ತಮ್ಮ ಸರ್ಕಾರದ ಸಾಧನೆಗಳ ವರದಿಯನ್ನು ನೀಡಿದ್ದರು. (ಏಜೆನ್ಸೀಸ್)