ಬಂಗಾರಪೇಟೆ ಗ್ರ್ರಾಮಾಂತರ: ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹಾಗೂ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಮುನಿಸ್ವಾಮಿ ಇಬ್ಬರೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅವರನ್ನು ನಂಬದೆ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಬೆಂಬಲಿಸಬೇಕು ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ಬಂಗಾರಪೇಟೆ ತಾಲೂಕಿನ ಕೆಸರನಹಳ್ಳಿ ಗ್ರಾಪಂ ವ್ಯಾಪ್ತಿಯ ತಟ್ನಹಳ್ಳಿಯಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಬೂತ್ ವಿಜಯ ಅಭಿಯಾನದಲ್ಲಿ ಮಾತನಾಡಿದರು. ಹತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದಿದ್ದರೂ ಬಿಟ್ಟಿ ಪ್ರಚಾರದಲ್ಲಿ ತೊಡಗಿ, ಜನರನ್ನು ಯಾಮಾರಿಸುತ್ತಿರುವ ಶಾಸಕ ನಾರಾಯಣಸ್ವಾಮಿ ಒಂದೆಡೆಯಾದರೆ, ಕಳೆದ ಚುನಾವಣೆ ಬಳಿಕ ಮಲ್ಲೇಶ್ ಮುನಿಸ್ವಾಮಿ ತಮ್ಮ ಇರುವಿಕೆಯನ್ನೇ ತೋರಿಸಲಿಲ್ಲ. ಶಾಸಕರ ದುರಾಡಳಿತದ ವಿರುದ್ಧ ಎಲ್ಲಿಯೂ ಧ್ವನಿ ಎತ್ತದೆ ಮೌನವಾಗಿದ್ದರು. ಆದ್ದರಿಂದ ಇವರಿಬ್ಬರೂ ಒಂದೇ ಎಂಬುದು ತಿಳಿಯುತ್ತದೆ ಎಂದು ಟೀಕಿಸಿದರು.
ರೋಗಿಗಳಿಲ್ಲದೆ ಸುತ್ತಾಡಿದ ಆ್ಯಂಬುಲೆನ್ಸ್: ಕರೊನಾ ಲಾಕ್ಡೌನ್ ಸಮಯದಲ್ಲಿ ಮಲ್ಲೇಶ್ ಮುನಿಸ್ವಾಮಿ ಅವರು ಆ್ಯಂಬುಲೆನ್ಸ್ ನೀಡಿದ್ದು, ಅದರಲ್ಲಿ ರೋಗಿಗಳಿಲ್ಲದಿದ್ದರೂ ನಿತ್ಯ ಪ್ರಚಾರಕ್ಕಾಗಿ ಆಂಬ್ಯುಲೆನ್ಸ್ ಸಂಚರಿಸುತ್ತಿತ್ತು. ಶಾಸಕ ಎಸ್.ಎನ್.ನಾರಾಯಣಸ್ವಾಮಿ ಜನರ ಒಳಿತಿಗಾಗಿ ಕೆಲಸ ಮಾಡದೆ ತಮ್ಮ ಸ್ವಂತ ಹಾಗೂ ಕುಟುಂಬಸ್ಥರ ಒಳಿತಿಗಾಗಿ ಹತ್ತು ವರ್ಷಗಳಿಂದ ಶ್ರಮಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಜನರಿಗೆ ವಂಚನೆ: ಸರ್ಕಾರಿ ಗೋಮಾಳ ಮತ್ತು ಖರಾಬು ಜಮೀನುಗಳನ್ನು ಕಬ್ಜ ಮಾಡಿಕೊಂಡಿರುವುದೇ ಶಾಸಕರ ಸಾಧನೆ. ಈಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಹಿಳೆಯರಿಗೆ 50 ರೂಪಾಯಿ ಬೆಲೆಬಾಳುವ ಸ್ವೆಟರ್ಗಳನ್ನು ಹಂಚಿ ವಂಚಿಸಲು ಮುಂದಾಗಿದ್ದಾರೆ. ಇದನ್ನು ಜನರು ನಂಬದೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಗಮನಿಸಿ, ಮತ್ತೊಮ್ಮೆ ಅಧಿಕಾರಕ್ಕೆ ತರಬೇಕೆ ವಿನ@ ಭೂಗಳ್ಳರನ್ನಲ್ಲ ಎಂದರು.
ಬಿಜೆಪಿ ಜನಪರ ಯೋಜನೆಗಳು: 176 ಕೋಟಿ ರೂ. ವೆಚ್ಚದಲ್ಲಿ ಕ್ಷೇತ್ರದ ಮನೆ ಮನೆಗೂ ನೀರು ಪೂರೈಸಲು ಕೇಂದ್ರ ಸರ್ಕಾರ ಹಣ ಮಂಜೂರು ಮಾಡಿದೆ. ಎಲ್ಲರ ಆರೋಗ್ಯಕ್ಕಾಗಿ ಆಯುಷ್ಮಾನ್ ಭಾರತ್ ಆರೋಗ್ಯಕಾರ್ಡ್ ನೀಡಿದೆ. ಬಡವರಿಗೆ ಎರಡು ವರ್ಷದಿಂದ ಉಚಿತ ಅಕ್ಕಿ ನೀಡಿದ್ದು, ಈಗ ಮತ್ತೆ ಒಂದು ವರ್ಷಕ್ಕೆ ವಿಸ್ತರಿಸಿದೆ. ಬಡ ವರ್ಗದವರಿಗೆ ಉಚಿತ ಗ್ಯಾಸ್ ನೀಡಿದೆ. ಕರೊನಾ ಸಮಯದಲ್ಲಿ ಉಚಿತ ಚಿಕಿತ್ಸೆ ನೀಡಿ ಜನರ ಪ್ರಾಣರಕ್ಷಣೆ ಮಾಡುವುದರ ಜತೆಗೆ ಕರೊನಾದಿಂದ ಸುರಕ್ಷಿತರಾಗಿರಲು ಉಚಿತ ಲಸಿಕೆ ವಿತರಿಸಿದೆ. ಕಿಸಾನ್ ಸಮ್ಮಾನ್ ಯೋಜನೆ ಸೇರಿ ಹಲವು ಯೋಜನೆಗಳ ಮೂಲಕ ಸರ್ಕಾರದ ಸಹಾಯಧನ ನೇರವಾಗಿ ಫಲಾನುಭವಿಗಳಿಗೆ ತಲುಪಿಸಲು ಕೇಂದ್ರ ಶ್ರಮ ವಹಿಸಿದೆ ಎಂದರು.
ಮಾಜಿ ಶಾಸಕ ಬಿ.ಪಿ. ವೆಂಕಟಮುನಿಯಪ್ಪ, ಕೆ.ಚಂದ್ರಾರೆಡ್ಡಿ, ಬಿ.ವಿ.ಮಹೇಶ್, ಬೂತ್ ಕಮಿಟಿ ವಿಸ್ತಾರಕ ಆನಂದ್, ಬಿಜೆಪಿ ತಾಲೂಕು ಅಧ್ಯಕ್ಷ ನಾಗೇಶ್, ಶ್ರೀನಿವಾಸಗೌಡ, ಅಮರೇಶ್, ಕಪಾಲಿ ಶಂಕರ್, ಚೌಡಪ್ಪ, ಶಾಂತಿನಗರ ಮಂಜುನಾಥ್ ಇತರರಿದ್ದರು.