ನವದೆಹಲಿ: ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ(ಎನ್ಐಎ) ಕಾಯ್ದೆ 2008 ಅಸಾಂವಿಧಾನಿಕ ಎಂದು ಘೋಷಿಸುವಂತೆ ಆಗ್ರಹಿಸಿ ಕಾಂಗ್ರೆಸ್ ನೇತೃತ್ವದ ಛತ್ತೀಸ್ಗಢ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಈ ಕಾಯ್ದೆಯನ್ನು ಪ್ರಶ್ನಿಸುತ್ತಿರುವ ಮೊದಲ ರಾಜ್ಯ ಸರ್ಕಾರ ಇದಾಗಿದೆ. ಇದಕ್ಕೂ ಮುನ್ನ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂವಿಧಾನದ ಅನುಚ್ಛೇದ 131 ಪ್ರಕಾರ ಪ್ರಶ್ನಿಸಿ ಕೇರಳ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಛತ್ತೀಸ್ಗಢ ಸರ್ಕಾರ ಕೂಡ ಇದೇ ಅನುಚ್ಛೇದ ಪ್ರಕಾರವೇ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಇದರ ಪ್ರಕಾರ, ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ನೇರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಕ್ಕೆ ಅವಕಾಶವಿದೆ.
ಅರ್ಜಿಯಲ್ಲಿ ಹೇಳಿರುವ ಪ್ರಕಾರ, ಎನ್ಐಎ ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರಕ್ಕೆ ತನಿಖೆಗಾಗಿ ಏಜೆನ್ಸಿ ರಚಿಸುವ ಅಧಿಕಾರ ಇದೆಯೇ ಹೊರತು ಅದು, ಎನ್ಐಎ ಜತೆಗೆ ಹೊಂದಿಕೆಯಾಗುವುದಿಲ್ಲ. ತನಿಖೆಯ ಏಜೆನ್ಸಿಯನ್ನು ರಾಜ್ಯ ಪೊಲೀಸರನ್ನು ಬಳಸಿಕೊಂಡು ಮಾಡಬೇಕು. ಸಂವಿಧಾನದ ಷೆಡ್ಯೂಲ್ 7, ಲಿಸ್ಟ್ 2, ಎಂಟ್ರಿ 2ರ ಪ್ರಕಾರ ರಾಜ್ಯ ಪೊಲೀಸರನ್ನು ತನಿಖೆಗೆ ಬಳಸಿಕೊಳ್ಳಬೇಕು. ಹೀಗಾಗಿ ರಾಜ್ಯದ ತನಿಖೆಯ ಅಧಿಕಾರವನ್ನು ಕೇಂದ್ರ ಸರ್ಕಾರ ಈ ಕಾಯ್ದೆ ಮೂಲಕ ಕಸಿದುಕೊಂಡಿದೆ ಎಂದು ಆರೋಪಿಸಲಾಗಿದೆ.
ಹೀಗಾಗಿ ಈ ಪ್ರಕರಣ ಈಗ ದೇಶದ ಗಮನಸೆಳೆದಿದ್ದು, ಕೋರ್ಟ್ ಇದನ್ನು ಯಾವ ರೀತಿ ಇತ್ಯರ್ಥಗೊಳಿಸುವುದೆಂಬ ಕುತೂಹಲ ಮೂಡಿದೆ. (ಏಜೆನ್ಸೀಸ್)