ಮೈಸೂರು: ‘ಫ್ರೀ ಕಾಶ್ಮೀರ’ ಭಿತ್ತಿಪತ್ರ ಪ್ರದರ್ಶನ ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶುಕ್ರವಾರ ನಗರದ ಗನ್ಹೌಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಮಾನಸಗಂಗೋತ್ರಿಯಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟ, ಬಿವಿಎಸ್, ಎಸ್ಎಫ್ಐ, ಎಐಡಿಎಸ್ಒ ಸಂಘಟನೆಗಳು ಜಂಟಿಯಾಗಿ ಜ.8ರಂದು ಪ್ರತಿಭಟನೆ ನಡೆಸಿದ್ದವು. ಈ ವೇಳೆ ‘ಫ್ರೀ ಕಾಶ್ಮೀರ’ ಫಲಕವನ್ನು ಪ್ರದರ್ಶಿಸಲಾಗಿದೆ. ಇದು ಖಂಡನೀಯ ಇಂತಹ ಘಟನೆಯ ಮೂಲಕ ವಿಶ್ವವಿದ್ಯಾಲಯದ ಪರಿಸರವನ್ನು ರಾಷ್ಟ್ರವಿರೋಧಿ ಚಟುವಟಿಕೆಗಳ ತಾಣವಾಗಿ ನಿರ್ಮಾಣ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಸಂಘಟನೆಗಳ ನೆಪದಲ್ಲಿ ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನಾಕಾರರು, ಫಲಕ ಪ್ರದರ್ಶಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ಕೂಡಲೇ ಅವರನ್ನು ಬಂಧಿಸಬೇಕು. ತಪ್ಪಿತಸ್ಥರನ್ನು ವಿವಿಯಿಂದಲೇ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಮುಖಂಡರಾದ ರಾಕೇಶ್, ಶ್ರೀರಾಮ, ಗೌತಮ್, ಶರತ್, ಮಲ್ಲಪ್ಪ, ಪ್ರಜ್ಞಾ ಕಶ್ಯಪ್ ಇನ್ನಿತರರು ಪ್ರತಿಭಟನೆಯಲ್ಲಿದ್ದರು.