ಕಂಪ್ಲಿ: ಕೃಷಿ, ತೋಟಗಾರಿಕೆ ಮತ್ತು ಕಂದಾಯ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ಬಳಿಕ ಭತ್ತ ನಷ್ಟ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಹಸೀಲ್ದಾರ್ ಎಂ.ರೇಣುಕಾ ಹೇಳಿದರು.
ತಾಲೂಕಿನಲ್ಲಿ ಮಂಗಳವಾರ ಮಧ್ಯಾಹ್ನ ಸುರಿದ ಮಳೆ, ಬೀಸಿದ ಗಾಳಿಗೆ ಭತ್ತ ನೆಲಕ್ಕೆ ಬಿದ್ದಿದ್ದು, ರೈತರ ಒತ್ತಾಯಕ್ಕಾಗಿ ಪಟ್ಟಣ ಹೊರವಲಯದಲ್ಲಿನ ವೆಂಕಟನಾಯ್ಡು ಇವರ ಭತ್ತದ ಗದ್ದೆಯನ್ನು ಬುಧವಾರ ವೀಕ್ಷಿಸಿ ಬಳಿಕ ಮಾತನಾಡಿದರು. ಕಂಪ್ಲಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ಮಳೆ ಗಾಳಿಗೆ 6 ಸಾವಿರ ಹೆಕ್ಟೇರ್ ಪ್ರದೇಶದ ಭತ್ತ ನೆಲ ಅಪ್ಪಿದ ಸಾಧ್ಯತೆ ಇದೆ. ಪ್ರಥಮ ವರ್ತಮಾನ ವರದಿ ಹಾಗೂ ರೈತರ ಬೇಡಿಕೆಗಳನ್ನು ಡಿಸಿ ಗಮನಕ್ಕೆ ತರಲಾಗುವುದು. ಭತ್ತ ನಷ್ಟವಾದ ಕುರಿತು ರೈತರು ಮೊಬೈಲ್ಗಳಲ್ಲಿ ಫೋಟೊ ತೆಗೆದುಕೊಂಡು ಇಟ್ಟುಕೊಂಡಿರಬೇಕು. ನಷ್ಟ ಪರಿಹಾರಕ್ಕಾಗಿ ಪಹಣಿ, ಆಧಾರ್ ಕಾರ್ಡ್ ಜೆರಾಕ್ಸ್, ಬ್ಯಾಂಕ್ ಪಾಸ್ಬುಕ್ ಜೆರಾಕ್ಸ್ ಪ್ರತಿಗಳನ್ನು ಗ್ರಾಮ ಲೆಕ್ಕಾಧಿಕಾರಿಗಳಿಗೆ ರೈತರು ಸಲ್ಲಿಸಬಹುದು ಎಂದು ಹೇಳಿದರು.
ರಾಜ್ಯ ರೈತ ಸಂಘ(ಕೋಡಿಹಳ್ಳಿ ಚಂದ್ರಶೇಖರ ಬಣ)ಜಿಲ್ಲಾ ಉಪಾಧ್ಯಕ್ಷ ಚೆಲ್ಲಾ ವೆಂಕಟನಾಯ್ಡು ಮನವಿ ಸಲ್ಲಿಸಿ, ತುಂಗಭದ್ರಾ ಎಡದಂಡೆ ಕೆಳಮಟ್ಟದ ಕಾಲುವೆ ಹಾಗೂ ವಿಜಯನಗರ ಕಾಲುವೆ ವ್ಯಾಪ್ತಿಯ ಕಂಪ್ಲಿ ಭಾಗದಲ್ಲಿ 22000 ಎಕರೆಯಲ್ಲಿ ಭತ್ತ ಬೆಳೆದಿದ್ದು, ಕೊಯ್ಲಿಗೆ ಬಂದ, ಕೆಲವಡೆ ಹಾಲುಕಟ್ಟುವ ಹಂತದ ಭತ್ತ ಬೆಳೆ ಮಳೆ ಗಾಳಿಗೆ ತುತ್ತಾಗಿದೆ. ಇದರಿಂದ ರೈತರಿಗೆ ನಷ್ಟ ಉಂಟಾಗುತ್ತಿದ್ದು, ನಷ್ಟ ಪರಿಹಾರವನ್ನು ಜತೆಗೆ ಕೊಯ್ಲು ಯಂತ್ರದ ಬಾಡಿಗೆ ಹಣವನ್ನು ಸರ್ಕಾರವೇ ಭರಿಸುವ ಮೂಲಕ ರೈತರ ಹಿತಕಾಪಾಡಬೇಕು ಎಂದು ತಹಸೀಲ್ದಾರರನ್ನು ಒತ್ತಾಯಿಸಿದರು.
ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀಧರ್, ಗ್ರಾಮಲೆಕ್ಕಾಧಿಕಾರಿ ಗಿರೀಶ್, ರಾಜ್ಯ ರೈತ ಸಂಘ ನಗರ ಅಧ್ಯಕ್ಷ ಕೊಟ್ಟೂರು ರಮೇಶ್, ಪದಾಧಿಕಾರಿಗಳಾದ ಟಿ.ಗಂಗಣ್ಣ, ಬಿ.ಕೆ.ದೇವೇಂದ್ರ, ಬಿ.ಕೆ.ಶಿವಣ್ಣ, ಬಿ.ವಲಿಬಾಷಾ, ಡಿ.ಮುರಾರಿ, ಕೆ.ಸುದರ್ಶನ, ಎನ್.ತಿಮ್ಮಣ್ಣ, ಪಿ.ಕೆ.ವೆಂಕೋಬಣ್ಣ, ಕೆ.ವೀರೇಶ್, ಕೆ.ಸಿದ್ದಪ್ಪ, ಡಿ.ವಿರುಪಣ್ಣ, ಆಜಿಂಬಾಷಾ ಇತರರಿದ್ದರು.