ಭದ್ರಾವತಿ: ಇಲ್ಲಿನ ಸಿದ್ದಾರೂಢನಗರ ನಿವಾಸಿಗಳಿಂದ ಭಾನುವಾರ ತ್ರಿವಿಧ ದಾಸೋಹಿ, ಲಿಂಗೈಕ್ಯ ಸಿದ್ದಗಂಗೆಯ ಶ್ರೀ ಶಿವಕುಮಾರ ಸ್ವಾಮೀಜಿ ಅವರ 5ನೇ ಪುಣ್ಯತಿಥಿಯನ್ನು ಭಾನುವಾರ ದಾಸೋಹ ದಿನವಾಗಿ ಆಚರಿಸಲಾಯಿತು.
ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಖಗೋಳ ತಜ್ಞ ಹರೋನಹಳ್ಳಿ ಸ್ವಾಮಿ, ನಾಡಿನ ಲಕ್ಷಾಂತರ ಬಡ ಮಕ್ಕಳಿಗೆ ಉಚಿತವಾಗಿ ಅನ್ನ, ವಿದ್ಯೆ ಕೊಟ್ಟು ಸುಸಂಸ್ಕೃತರನ್ನಾಗಿಸುವ ಕೆಲಸ ಮಾಡಿರುವ ಶ್ರೀಗಳು ವಿಶ್ವಕ್ಕೇ ಮಾದರಿ ಎಂದರು. ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ ಮಾತನಾಡಿ, ಶ್ರೀ ಶಿವಕುಮಾರ ಸ್ವಾಮೀಜಿಗಳನ್ನು ತಾಲೂಕಿಗೆ ಕರೆತಂದು ಸನ್ಮಾನಿಸಿದ ತೃಪ್ತಿ ನಮಗಿದೆ. ಎಲ್ಲರ ಹೃದಯದಲ್ಲೂ ನೆಲೆಸಿರುವ ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕಾಗಿದೆ ಎಂದು ತಿಳಿಸಿದರು. ಸಿದ್ದಲಿಂಗಯ್ಯ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ಥಳೀಯ ನಿವಾಸಿಗಳಾದ ಶಾಂತಕುಮಾರ್, ಪೂರ್ಣಿಮಾ, ಲತಾಕುಮಾರಿ, ಸುಮಾ, ರೇಖಾ, ವಾಸಣ್ಣ ಇತರರಿದ್ದರು.