ಕಿಕ್ಕೇರಿ : ಗ್ರಾಮೀಣ ಪ್ರದೇಶದಲ್ಲಿಯೂ ಯುವಕರು ಕ್ರೀಡೆಗಳಿಗೆ ಉತ್ಸಾಹಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದು ಆರ್ಟಿಒ ನೌಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಮೆಚ್ಚುಗೆ ವ್ಯಕ್ತಪಡಿಸಿದರು.
ಹೋಬಳಿಯ ಶೆಟ್ಟಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಕನಕ ಕ್ರಿಕೆಟರ್ಸ್ ಏರ್ಪಡಿಸಿದ್ದ ತಾಲೂಕು ಮಟ್ಟದ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸಲು ಯುವಕರು ಮುಂದಾಗಬೇಕು. ಕ್ರಿಕೆಟ್ ಮಾತ್ರ ಕ್ರೀಡೆ ಎಂಬ ಭಾವನೆ ದೂರ ಸರಿಸಿ. ಸಾಕಷ್ಟು ಗ್ರಾಮೀಣ ಕ್ರೀಡೆಗಳಿವೆ. ವಾಲಿಬಾಲ್, ಕಬಡ್ಡಿ, ಖೋ ಖೋ ಅಂತಹ ಹಲವಾರು ಕ್ರೀಡೆ ಎಲ್ಲರಿಗೂ ಖುಷಿ ನೀಡಲಿವೆ. ರೈತರಿಗಾಗಿ ಮೀಸಲಾಗಿರುವ ಖುಷಿ ಕೊಡುವ ಮೂಟೆ ಹೊತ್ತು ಓಡುವ ಸ್ಪರ್ಧೆ, ಹಗ್ಗಜಗ್ಗಾಟ ಸ್ಪರ್ಧೆ, ಕೆಸರುಗದ್ದೆ ಓಟದಂತಹ ಕ್ರೀಡೆಗಳನ್ನು ಹಮ್ಮಿಕೊಳ್ಳಿ ಎಂದು ಸಲಹೆ ನೀಡಿದರು.
ಕ್ರೀಡಾಕೂಟ ಯುವಕರಲ್ಲಿ ಸಂಘಟನೆ, ಒಗ್ಗಟ್ಟಿನ ಬಲವನ್ನು ಪ್ರದರ್ಶಿಸಲಿವೆ. ಕ್ರೀಡೆಯಲ್ಲಿ ಸೋಲು, ಗೆಲುವನ್ನು ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಬೇಕು. ನ್ಯಾಯಯುತ ತೀರ್ಪು ನೀಡಲು ಎಲ್ಲರೂ ಸಹಕರಿಸಬೇಕು ಎಂದು ಸಲಹೆ ನೀಡಿದರು.
ಮುಖಂಡರಾದ ಚಂದ್ರು, ಶೇಖರ್, ಜಯಣ್ಣ, ತಮ್ಮಯ್ಯ, ಕೃಷ್ಣೇಗೌಡ, ದೊಡ್ಡೇಗೌಡ, ಅಚ್ಯುತ, ಆದಿತ್ಯ, ಮಂಜೇಗೌಡ, ರಾಮಯ್ಯ, ದರ್ಶನ್, ಸತ್ಯ, ಅಂಕೇಶ್, ಪುನೀತ್, ಪ್ರೀತಿ, ಶಿವಕುಮಾರ್, ಕೀರ್ತಿ ಮತ್ತಿತರರಿದ್ದರು.