ಬೆಂಗಳೂರು: ಬಿಗ್ಬಾಸ್ ಮನೆಯಿಂದ ಡ್ರೋನ್ ಪ್ರತಾಪ್ ಕಣ್ಮರೆಯಾಗಿರುವುದರಿಂದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅಲ್ಲದೆ, ಊಹಾಪೋಹಗಳು ಸಹ ಹರಿದಾಡುತ್ತಿವೆ. ಪ್ರತಾಪ್ ಎಲ್ಲಿ ಹೋದರು ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಇದರ ನಡುವೆ ಪ್ರತಾಪ್ ದೊಡ್ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿಯು ಸಹ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ. ಹಾಗಾದ್ರೆ ನಿಜಕ್ಕೂ ಪ್ರತಾಪ್ ಆತ್ಮಹತ್ಯೆಗೆ ಯತ್ನಿಸಿದ್ರಾ? ಪ್ರತಾಪ್ಗೆ ಏನಾಗಿದೆ? ಯಾಕೆ ಅವರು ದೊಡ್ಮನೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಅಂದಹಾಗೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಮುಗಿಯುವ ಹಂತಕ್ಕೆ ಬಂದಿದೆ. ಇನ್ನು ಕೆಲವೇ ವಾರಗಳಲ್ಲಿ ಶೋ ಮುಕ್ತಾಯಗೊಳ್ಳಲಿದೆ. ಸದ್ಯ ಮನೆಯಲ್ಲಿ 9 ಮಂದಿ ಸ್ಪರ್ಧಿಗಳಿದ್ದಾರೆ. ಜನರ ಪ್ರಕಾರ ಬಿಗ್ಬಾಸ್ ಸೀಸನ್ 10ರ ಫೈನಲಿಸ್ಟ್ಗಳಲ್ಲಿ ಡ್ರೋನ್ ಪ್ರತಾಪ್ ಕೂಡ ಒಬ್ಬರಾಗಿದ್ದಾರೆ. ಶೋನ ಕೊನೆಯ ಘಟ್ಟದಲ್ಲಿ ಪ್ರತಾಪ್ ಕಾಣೆಯಾಗಿರುವುದು ಅವರ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.
ಕಲರ್ಸ್ ಕನ್ನಡ ಸ್ಪಷ್ಟನೆ
ಆತ್ಮಹತ್ಯೆ ಯತ್ನ ವದಂತಿಯ ಕುರಿತು ಕಲರ್ಸ್ ಕನ್ನಡದ ವಕ್ತಾರರು ವಿಜಯವಾಣಿಗೆ ಸ್ಪಷ್ಟನೆ ನೀಡಿದ್ದು, ಆತ್ಮಹತ್ಯೆ ಯತ್ನ ಎಂಬುದು ಕೇವಲ ವದಂತಿಯಷ್ಟೇ. ಎರಡು ದಿನಗಳಿಂದ ಪ್ರತಾಪ್ ಅವರು ಸರಿಯಾಗಿ ಊಟ ಮಾಡಿರಲಿಲ್ಲ. ಹೀಗಾಗಿ ಅವರಿಗೆ ವಿಟಮಿನ್ ಟ್ಯಾಬ್ಲೆಟ್ ಕೊಟ್ಟ ಬಳಿಕ ತುಂಬಾ ಸುಸ್ತಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅವರಿಗೆ ಫುಡ್ ಪಾಯಿಸನ್ ಆಗಿದೆ ಎಂದು ತಿಳಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲೂ ಸ್ಪಷ್ಟನೆ
ಅಷ್ಟಕ್ಕೂ ಈ ಸುದ್ದಿ ಹರಡಲು ಕಾರಣ ಏನೆಂದರೆ, ನಿನ್ನೆಯಿಂದ ಬಿಗ್ಬಾಸ್ ಲೈವ್ನಲ್ಲಿ ಪ್ರತಾಪ್ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಪ್ರತಾಪ್ಗೆ ಏನಾಯಿತು ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದರು. ಇದೀಗ ಕಲರ್ಸ್ ಕನ್ನಡ ಸ್ಪಷ್ಟನೆ ನೀಡಿದೆ. ಅಲ್ಲದೆ, ಡ್ರೋನ್ ಪ್ರತಾಪ್ ಇನ್ಸ್ಟಾಗ್ರಾಂ ಪೇಜ್ನಲ್ಲೂ ಸ್ಪಷ್ಟನೆ ನೀಡಿದ್ದು, ಊಟದಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಿ ಹುಷಾರು ತಪ್ಪಿದ್ದಾರೆ. ಇನ್ನೂ ಸ್ವಲ್ಪ ಸಮಯದ ಒಳಗೆ ಬಿಗ್ಬಾಸ್ ಮನೆಗೆ ನಿಮ್ಮ ಡ್ರೋನ್ ಪ್ರತಾಪ್ ಅವರು ತೆರಳಲಿದ್ದಾರೆ. ಈ ವಾರ ಹೆಚ್ಚಿನ ಸಂಖ್ಯೆಯಲ್ಲಿ ಅವರಿಗೆ ವೋಟ್ ಮಾಡಿ ಸೇವ್ ಮಾಡಿ ಎಂದು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಉಲ್ಲೇಖಿಸಲಾಗಿದೆ.
ಚಿಂತೆಗೀಡಾದ್ರಾ ಪ್ರತಾಪ್
ಪ್ರತಾಪ್ಗೆ ಇದ್ದಕ್ಕಿದ್ದಂತೆ ಏಕೆ ಹೀಗಾಯಿತು? ಬಿಗ್ಬಾಸ್ ಮನೆಗೆ ಹೊಸ ವರ್ಷದ ಮೊದಲ ದಿನದಂದು ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಭೇಟಿ ನೀಡಿ ಡ್ರೋನ್ ಪ್ರತಾಪ್ ಸಂಕಟ ಪಡುವಂತಹ ಭವಿಷ್ಯ ಹೇಳಿದ್ದರು. ಈ ವಿಚಾರ ಹೇಳುವುದಕ್ಕೆ ನನಗೆ ಸಂಕಟವಾಗುತ್ತಿದೆ. ಕುಟುಂಬದಿಂದ ದೂರವೇ ಇರಬೇಕಾಗುತ್ತದೆ. ಕುಟುಂಬದ ಜೀವನ ಅಷ್ಟು ಸರಿ ಇಲ್ಲ. ದೂರ ಇದ್ದು ದೂಪವಾಗ್ತೀಯೋ ಹತ್ತಿರ ಹೋಗಿ ಹೇಸಿಗೆ ಆಗ್ತೀಯೋ ನಿನಗೆ ಬಿಟ್ಟಿದ್ದು ಎಂದು ಸ್ವಾಮೀಜಿ ನೇರವಾಗಿ ಹೇಳಿದರು. ಅವರ ಮಾತುಗಳನ್ನು ಕೇಳಿ ಪ್ರತಾಪ್ ಕಣ್ಣುಗಳಲ್ಲಿ ಕಣ್ಣೀರು ತುಂಬಿ ಹರಿದಿತ್ತು. ಅಂದಿನಿಂದ ಪ್ರತಾಪ್ ತುಂಬಾ ಚಿಂತಿಸುತ್ತಿದ್ದರು ಎಂದು ಹೇಳಲಾಗಿದೆ.
ಕಳೆದ ವಾರವಷ್ಟೇ ಬಿಗ್ಬಾಸ್ ಮನೆಗೆ ಪ್ರತಾಪ್ ಅವರ ತಂದೆ-ತಾಯಿ ಬಂದು ಹೋಗಿದ್ದರು. ಬಹಳ ಖುಷಿಪಟ್ಟಿದ್ದ ಪ್ರತಾಪ್, ಸ್ವಾಮೀಜಿ ಭವಿಷ್ಯದಿಂದ ತುಂಬಾ ಕುಗ್ಗಿದ್ದರು. ಇದೀಗ ಅನಾರೋಗ್ಯ ಬಂದಿರುವುದು ಪ್ರತಾಪ್ ಅಭಿಮಾನಿಗಳಿಗೆ ಬೇಸರದ ಸಂಗತಿಯಾಗಿದೆ. ಆದಷ್ಟು ಬೇಗ ಗುಣಮುಖರಾಗಲಿ ಎಂದು ಬಯಸುತ್ತಿದ್ದಾರೆ.
ಅಂದಹಾಗೆ ಡ್ರೋನ್ ಪ್ರತಾಪ್ ಅವರು ಬಿಗ್ಬಾಸ್ಗೆ ಹೋದ ಮೇಲಂತೂ ಅವರ ಮೇಲೆ ಜನರಿಗಿದ್ದ ಅಭಿಪ್ರಾಯ ಸಂಪೂರ್ಣ ಬದಲಾಗಿದೆ. ಈ ಮೊದಲು ಪ್ರತಾಪ್ ಬಗ್ಗೆ ಬರೀ ನೆಗಿಟಿವ್ ಅಭಿಪ್ರಾಯಗಳೇ ಕೇಳಿಬರುತ್ತಿತ್ತು. ಆದರೆ, ಈಗ ಪ್ರತಾಪ್ ಎಲ್ಲರ ನೆಚ್ಚಿನ ಸ್ಪರ್ಧಿಯಾಗಿದ್ದಾರೆ. ಅದಕ್ಕೆ ಕಾರಣ ದೊಡ್ಮನೆಯೊಳಗೆ ಪ್ರತಾಪ್ ಆಡುತ್ತಿರುವ ರೀತಿ. ಎಲ್ಲ ಟಾಸ್ಕ್ಗಳಲ್ಲೂ ಚೆನ್ನಾಗಿ ಆಡುತ್ತಿರುವ ಪ್ರತಾಪ್ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಜನರಿಗೆ ತಮ್ಮ ಮೇಲಿದ್ದ ಕೆಟ್ಟ ಅಭಿಪ್ರಾಯವನ್ನು ತೊಡೆದು ಹಾಕಿದ್ದಾರೆ. ಹೀಗಾಗಿ ಜಾಲತಾಣದಲ್ಲಿ ಪ್ರತಾಪ್ ಸಾಕಷ್ಟು ಬೆಂಬಲ ವ್ಯಕ್ತವಾಗುತ್ತಿದೆ.
ಸದ್ಯ ಬಿಗ್ಬಾಸ್ ಮನೆಯಲ್ಲಿ ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್, ಕಾರ್ತಿಕ್, ವರ್ತೂರ್ ಸಂತೋಷ್, ತುಕಾಲಿ ಸಂತೋಷ್, ನಮ್ರತಾ, ವಿನಯ್ ಗೌಡ, ತನಿಷಾ ಮತ್ತು ಮೈಕಲ್ ಉಳಿದುಕೊಂಡಿದ್ದಾರೆ. (ಏಜೆನ್ಸೀಸ್)
ಪ್ರಿಯಕರನಿಗೆ ತಕ್ಕ ಪ್ರೇಯಸಿ: ಈ ನಟೋರಿಯಸ್ ಜೋಡಿ ಮಾಡಿದ ಕೆಲಸವನ್ನು ನೀವ್ಯಾರು ಟ್ರೈ ಮಾಡ್ಬೇಡಿ!
ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ‘ಟಾಕ್ಸಿಕ್’ನಲ್ಲಿ ಬಾಲಿವುಡ್ ಬೆಡಗಿ ಕರೀನಾ ಕಪೂರ್?