ಕೊಪ್ಪಳ: ದಡಾರ, ರುಬೆಲ್ಲಾ ನಿರ್ಮೂಲನೆಗೆ ಹಮ್ಮಿಕೊಂಡಿರುವ ಮಿಷನ್ ಇಂದ್ರಧನುಷ್ 5.0 ಲಸಿಕಾ ಅಭಿಯಾನವನ್ನು ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸಿ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ದಡಾರ ಮತ್ತು ರುಬೆಲ್ಲಾ ರೋಗ ನಿರೋಧಕತೆ ಅಂತರ ಕಡಿಮೆ ಮಾಡುವುದು. ಗರ್ಭಿಣಿ ಮತ್ತು 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಲಸಿಕೆ ಹಾಕಿ.
ಅಭಿಯಾನದಲ್ಲಿ ಸಮುದಾಯ ಪಾಲ್ಗೊಲ್ಳುವಿಕೆ, ಆರೋಗ್ಯ ಇಲಾಖೆ ಜತೆಗೆ ಇತರ ಇಲಾಖೆಗಳು ಕೈ ಜೋಡಿಸುವುದು ಮುಖ್ಯ. ಗರ್ಭಿಣಿ, ಐದು ವರ್ಷದೊಳಗಿನ ಮಕ್ಕಳ ಮಾಹಿತಿ ಪಡೆಯಿರಿ. ಲಸಿಕೆ ಪಡೆದವರು, ಪಡೆಯದವರ ಪ್ರತ್ಯೇಕ ಪಟ್ಟಿ ರಚಿಸಿ.
ಈವರೆಗೆ ಪಡೆಯದವರಿಗೆ ಲಸಿಕೆ ಹಾಕಿ. ಭಿಯಾಮಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಿ. ಜನರಿಗೆ ಗ್ರಾಪಂವಾರು ಜಾಗೃತಿ ಮೂಡಿಸಿ. ಲಸಿಕೆ ಬೇಡ ಎಂದವರ ಮನವೊಲಿಸಿ. ನಗರ, ಸ್ಥಳೀಯ ಸಂಸ್ಥೆಗಳು ಸ್ಲಂಗಳಲ್ಲಿ ಅರಿವು ಮೂಡಿಸಿ ಎಂದರು.
ಮಕ್ಕಳನ್ನು ಹೊಸದಾಗಿ ಶಾಲೆಗೆ ದಾಖಲಸಿಕೊಳ್ಳುವ ಮುನ್ನ ಲಸಿಕೆ ಪಡೆದ ಬಗ್ಗೆ ಮಾಹಿತಿ ಪಡೆಯಿರಿ. ಪಡೆಯದಿದ್ದಲ್ಲಿ ಪಡೆಯುವಂತೆ ತಿಳಿಸಿ. ಶಾಲಾ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ಮಾಡಿಸಿ. ಕಟ್ಟಡ ಕಾರ್ಮಿಕರ ಸಂಘಗಳ ಮೂಲಕ ಕಾರ್ಮಿಕರಿಗೆ ಮಾಹಿತಿ ತಲುಪಿಸಿ. ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನಡೆಸಿ. ಎನ್ಜಿಒಗಳ ಮೂಲಕವು ಸಾಧ್ಯವಾದಷ್ಟು ಮಾಹಿತಿ ಹಂಚಿಕೊಳ್ಳಲು ತಿಳಿಸಿ. ಸಾರ್ವಜನಿಕರು ಲಸಿಕೆ ಬಗ್ಗೆ ಪೂರ್ವಗ್ರಹ ಪೀಡಿತರಾಗಬಾರದು. ಹತ್ತಿರದ ಸರ್ಕಾರಿ ಆಸ್ಪತ್ರೆ, ಅಂಗನವಾಡಿ ಸಂಪರ್ಕಿಸಿ ಗರ್ಭಿಣಿ, 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಬೇಕೆಂದು ಮನವಿ ಮಾಡಿದರು.
ಅಪರ ಜಿಲಾಧಿಕಾರಿ ಸಾವಿತ್ರಿ ಕಡಿ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಗಂಗಪ್ಪ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ಪಪ್ಪ ಹೊಸಮನಿ ಇತರ ಇಲಾಖೆ ಅಧಿಕಾರಿಗಳಿದ್ದರು.