ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಪ್ರಚಾರ ಕಾರ್ಯಕ್ರಮದ ವೇದಿಕೆಯ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಎಂ.ಎಸ್.ರಕ್ಷಾ ರಾಮಯ್ಯ ಕೂರಲಿಲ್ಲ. ಹಾಗೆಯೇ ನಾಯಕರು ಅಭ್ಯರ್ಥಿಯ ಹೆಸರನ್ನು ಪ್ರಸ್ತಾಪಿಸದೇ ನೇರವಾಗಿ ಪಕ್ಷವನ್ನು ಗೆಲ್ಲಿಸಲು ಕರೆ ನೀಡಿದರು.
ಹೌದು! ಹೀಗೆ ನಡೆದಿದ್ದು ಬಾಗೇಪಲ್ಲಿಯಲ್ಲಿ ಕಾಂಗ್ರೆಸ್ ಕೈಗೊಂಡಿದ್ದ ಪ್ರಜಾ ಧ್ವನಿ 2 ಸಮಾವೇಶದಲ್ಲಿ. ಚಿಕ್ಕಬಳ್ಳಾಪುರದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಎಸ್.ರಕ್ಷಾ ರಾಮಯ್ಯ ಪಕ್ಷದ ವೇದಿಕೆ ಏರಲಿಲ್ಲ. ಬದಲಿಗೆ ಕಾರ್ಯಕ್ರಮದ ವೇದಿಕೆಯ ಮುಂಭಾಗ ಏಕಾಂಗಿಯಾಗಿ ಕುಳಿತುಕೊಂಡರು. ಸಿಎಂ ಆದಿಯಾಗಿ ಎಲ್ಲರೂ ಕಾಂಗ್ರೆಸ್ ಗೆಲುವಿಗೆ ಕರೆ ನೀಡಿದರು.
* ಕಾಂಗ್ರೆಸ್ ತಂತ್ರಗಾರಿಕೆ ವೆಚ್ಚ
ಪ್ರಜಾಧ್ವನಿ 2 ಸಮಾವೇಶದಲ್ಲಿ ಭಾಗಿಯಾದರೆ, ವೇದಿಕೆಯ ಕಾರ್ಯಕ್ರಮಕ್ಕೆ ತಗುಲಿರುವ ಚುನಾವಣಾ ವೆಚ್ಚವನ್ನು ಕಾಂಗ್ರೆಸ್ ಅಭ್ಯರ್ಥಿಯ ಲೆಕ್ಕಕ್ಕೆ ಸೇರಿಸುತ್ತಾರೆ. ಇದರಿಂದ ಅಭ್ಯರ್ಥಿಗೆ ವೆಚ್ಚದ ಹೊರೆ ಜಾಸ್ತಿಯಾಗುತ್ತದೆ. ಮುಂಬರುವ ದಿನಗಳಲ್ಲಿ ಪ್ರಚಾರಕ್ಕೆ ಕಡಿಮೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಇದಕ್ಕೆ ಪ್ರಜಾಧ್ವನಿ 2 ಸಮಾವೇಶವನ್ನು ಪಕ್ಷದ ಹೆಸರಿನಲ್ಲಿ ನಡೆಸುವ ಮೂಲಕ ಕಾಂಗ್ರೆಸ್ ಬುದ್ದಿವಂತಿಕೆಯನ್ನು ಪ್ರದರ್ಶಿಸಿದೆ. ನೇರವಾಗಿ ಅಭ್ಯರ್ಥಿಯ ಹೆಸರನ್ನು ಹೇಳಲಿಲ್ಲ. ವೇದಿಕೆಯ ಮೆಲೆ ಅಭ್ಯರ್ಥಿಯನ್ನು ಕೂರಿಸಲಿಲ್ಲ. ಇದರೊಂದಿಗೆ ಕಾರ್ಯಕ್ರಮದ ವೆಚ್ಚವು ಪಕ್ಷದ ಲೆಕ್ಕಕ್ಕೆ ಸೇರ್ಪಡೆಯಾಗುವ ನಿಟ್ಟಿನಲ್ಲಿ ನಡೆ ಅನುಸರಿಸಿದೆ.
*ಏಕಾಂಗಿಯಾಗಿ ಕುಳಿತ ಅಭ್ಯರ್ಥಿ
ವೇದಿಕೆಯ ಮುಂಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಏಕಾಂಗಿಯಾಗಿ ಜನರಿಗೆ ಮುಖ ಕಾಣುವಂತೆ ಕುಳಿತರು. ಇದಕ್ಕೂ ಮೊದಲು ಚಿಕ್ಕಬಳ್ಳಾಪುರದಲ್ಲೂ ಸಿಎಂ ಸಿದ್ದರಾಮಯ್ಯ ಅಭ್ಯರ್ಥಿಯೊಂದಿಗೆ ಬೃಹತ್ ರೋಡ್ ಶೋ ನಡೆಸಿದರು.