ತೆಲಂಗಾಣ: ಕರೊನಾ ವೈರಸ್ ಪ್ರಸರಣದ ಪ್ರಮಾಣ ಹೆಚ್ಚುತ್ತಿರುವ ಸಂದರ್ಭದಲ್ಲಿ ಆರ್ಥಿಕತೆಗೆ ತೀವ್ರ ಹೊಡೆತ ಬಿದ್ದಿದೆ. ಹಾಗೇ ಸರ್ಕಾರಗಳ ಖರ್ಚು ಹೆಚ್ಚಾಗಿದೆ.
ಕೆಲಸವಿಲ್ಲದೆ, ಹೊಟ್ಟೆಗಿಲ್ಲದೆ ಪರದಾಡುತ್ತಿರುವ ಅದೆಷ್ಟೋ ವಲಸೆ ಕಾರ್ಮಿಕರು, ದಿನಗೂಲಿ ನೌಕರರ ಜವಾಬ್ದಾರಿಯನ್ನು ಸರ್ಕಾರಗಳು ತೆಗೆದುಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಪ್ರಮುಖ ನಿರ್ಣಯವೊಂದನ್ನು ಕೈಗೊಂಡಿದ್ದು, ಅದು ಇಡೀ ದೇಶಕ್ಕೆ ಮಾದರಿಯಾಗಬಹುದು.
ರಾಜ್ಯದಲ್ಲಿ ತಮ್ಮನ್ನೂ ಸೇರಿಸಿ, ಎಲ್ಲ ಜನಪ್ರತಿನಿಧಿಗಳ ಏಪ್ರಿಲ್ ತಿಂಗಳ ವೇತನದಲ್ಲಿ ಶೇ.75ರಷ್ಟು ಕಡಿತಗೊಳಿಸಲಾಗುವುದು. ಆ ಹಣ ಸರ್ಕಾರಕ್ಕೆ ಉಳಿಯುತ್ತದೆ. ಕರೊನಾ ವಿರುದ್ಧ ಹೋರಾಟಕ್ಕೆ, ಲಾಕ್ಡೌನ್ ಸಂತ್ರಸ್ತರ ಅಗತ್ಯ ಪೂರೈಕೆಗೆ ಅದನ್ನು ಬಳಸಿಕೊಳ್ಳಲಾಗುವುದು ಎಂದು ಕೆಸಿಆರ್ ಸೋಮವಾರ ಘೋಷಿಸಿದ್ದಾರೆ.
ರಾಜ್ಯದ ಸಚಿವರಿಂದ ಹಿಡಿದು, ಸ್ಥಳೀಯ ಆಡಳಿತಗಳ ಜನಪ್ರತಿನಿಧಿಗಳು, ಎಂಎಲ್ಸಿಗಳು, ಎಲ್ಲ ಶಾಸಕರ ಏಪ್ರಿಲ್ ತಿಂಗಳ ವೇತನದಲ್ಲಿ ಶೇ.75 ಕಡಿತವಾಗಲಿದ್ದು, ಶೇ.25ರಷ್ಟು ಮಾತ್ರ ಅವರ ಪಾಲಿಗೆ ಸಿಗಲಿದೆ.
ಹಾಗೇ ತೆಲಂಗಾಣ ರಾಜ್ಯ ಸಾರಿಗೆ ಸಂಸ್ಥೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆಗಳಂತಹ ರಾಜ್ಯ ಸರ್ಕಾರಿ ಸಂಸ್ಥೆಗಳಿಗೂ ಇದೇ ನಿಯಮ ಅನ್ವಯ ಆಗಲಿದೆ.
ನಾಗರಿಕ ಸೇವಕರು(ಸಿವಿಲ್ ಸರ್ವಂಟ್ಸ್), ಪೊಲೀಸ್, ವಿದೇಶಿ ವಿನಿಮಯ ಸೇವೆಯಲ್ಲಿರುವ ಅಧಿಕಾರಿಗಳು ಸೇರಿ ಇನ್ನುಳಿದ ಎಲ್ಲ ಕೇಂದ್ರ ಸೇವಾ ಅಧಿಕಾರಿಗಳ ವೇತನದಲ್ಲಿ ಶೇ.60 ರಷ್ಟು ಕಡಿತವಾಗಿದೆ ಮತ್ತು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಪೆನ್ಷನ್ ಹಣವನ್ನು ಶೇ.50ರಷ್ಟು ಮಾತ್ರ ಪಾವತಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಕರೊನಾ ವೈರಸ್ ತೀವ್ರತೆ ತೆಲಂಗಾಣದ ಆರ್ಥಿಕತೆಯ ಮೇಲೆ ತುಂಬ ವ್ಯತಿರಿಕ್ತ ಪರಿಣಾಮ ಬೀರಿದೆ. ಕಾಯಿಲೆ ನಿಯಂತ್ರಣಕ್ಕೆ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)