ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷನ ಸ್ಥಾನದಿಂದ ನನ್ನನ್ನು ಕೆಳಗಿಳಿಸಲು ಸಾಧ್ಯವಿಲ್ಲ. ವರಿಷ್ಠರ ಈ ನಿರ್ಧಾರವನ್ನು ನಾನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ. ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸುತ್ತೇನೆ ಎಂದು ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ಪಕ್ಷದ ರಾಜ್ಯ ಘಟಕ ವಿಸರ್ಜನೆ ಕುರಿತು ಮಾತನಾಡಿದ ಅವರು, ತಮ್ಮ ಪುತ್ರನ ಸಲುವಾಗಿ ಬೇರೆಯವರ ಮಕ್ಕಳನ್ನು ದೇವೇಗೌಡರು ಬಲಿ ಕೊಡುತ್ತಿದ್ದಾರೆ. ದೃತರಾಷ್ಟ್ರನಿಗಾದ ಸ್ಥಿತಿ ಅವರಿಗೂ ಬರಲಿದೆ ಎಂದು ಕಿಡಿಕಾರಿದ್ದಾರೆ.
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷನ ಸ್ಥಾನದಿಂದ ನನ್ನನ್ನು ಕೆಳಗಿಳಿಸುವ ಅಧಿಕಾರ ಉನ್ನತ ನಾಯಕರ ಸಭೆಗೆ ಇಲ್ಲ. ಅವರ ಈ ನಿರ್ಧಾರವನ್ನು ನಾನು ನ್ಯಾಯಾಲಯ ಹಾಗೂ ಚುನಾವಣಾ ಆಯೋಗದಲ್ಲಿ ಪ್ರಶ್ನಿಸುತ್ತೇನೆ.
ಇದನ್ನೂ ಓದಿ: ನಿಮ್ಮ ಬಾಯಲ್ಲಿರುವುದು ನಾಲಿಗೆಯೋ ಅಥವಾ ಕೊಳಕುಮಂಡಲ ಹಾವೋ; ಮಾಜಿ ಸಿಎಂ ಎಚ್ಡಿಕೆ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ನನ್ನ ಪುತ್ರನನ್ನು ಕಳೆದುಕೊಂಡು ನಾನು ಹುಬ್ಬಳ್ಳಿ ಈದ್ಗಾ ಮೈದಾನದ ಸಮಸ್ಯೆಯನ್ನು ಬಗೆಹರಿಸಿ ಜೆಡಿಎಸ್ ಸರ್ಕಾರವನ್ನು ಗಟ್ಟಿ ಮಾಡಿದ್ದೆ. ಈಗ ದೇವೇಗೌಡರು ತಮ್ಮ ಪುತ್ರನ ಸಲುವಾಗಿ ಬೇರೆಯವರ ಮಕ್ಕಳನ್ನು ಬಲಿ ಕೊಡುತ್ತಿದ್ದಾರೆ. ಮಹಾಭಾರತದಲ್ಲಿ ದೃತರಾಷ್ಟ್ರನಿಗಾದ ಸ್ಥಿತಿ ಅವರಿಗೂ ಬರಲಿದೆ ಎಮದು ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಪಕ್ಷದ ಕಾರ್ಯಕಾರಿ ಸಮಿತಿ ವಿಸರ್ಜಿಸಿದ ನಂತರ ಕುಮಾರಸ್ವಾಮಿ ಅವರಿಗೆ ಏಕೆ ಅಧಿಕಾರಿ ನೀಡಿದ್ದರು. ಬೇರೆಯವರಿಗೆ ಕೊಡಬಹುದಿತ್ತಲ್ಲವೇ. ನಾನು ನಾಲ್ಕು ವರ್ಷಗಳ ಅವಧಿ ಇದ್ದ ವಿಧಾನಪರಿಷತ್ ಸ್ಥಾನ ತೊರೆದು ನಾನು ಜೆಡಿಎಸ್ಗೆ ಬಂದೆ. ಈ ರೀತಿ ಇನ್ನೂ ಎಷ್ಟು ಮನೆ ಹಾಳು ಮಾಡಿದ್ದೀರಾ. ಈಗಾಗಲೇ ನಿಮಗೆ 90 ವರ್ಷ ಆಗಿದೆ. ಇನ್ನಾದರೂ ಇದನ್ನೆಲ್ಲಾ ನಿಲ್ಲಿಸಿ. ನನ್ನನ್ನು ಕೆಣಕಿದರೆ ನೆಟ್ಟಗಿರುವುದಿಲ್ಲ ಎಂದು ಜೆಡಿಎಸ್ ನಾಯಕರಿಗೆ ಸಿ.ಎಂ. ಇಬ್ರಾಹಿಂ ಎಚ್ಚರಿಕೆ ನೀಡಿದ್ದಾರೆ.