ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನವಾದ ಇಂದು ತುರ್ತುಚಿಕಿತ್ಸೆಯ ಅಗತ್ಯವಿದ್ದ ಹಸುಗೂಸಿಗೆ ಮುಖ್ಯಮಂತ್ರಿಯವರ ಕಡೆಯಿಂದಲೇ ನೆರವಿನ ಯೋಗ ಒದಗಿಬಂದಿದೆ. ಪರಿಣಾಮವಾಗಿ ಮಗುವೊಂದು ತುರ್ತುಚಿಕಿತ್ಸೆಯನ್ನು ಸುಲಭದಲ್ಲಿ ಮತ್ತು ಅಗತ್ಯ ಸಮಯದೊಳಗೆ ಪಡೆದುಕೊಳ್ಳುವಂತಾಗಿದೆ.
ಇಂದು ಮೈಸೂರಿನಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಬೆಂಗಳೂರಿಗೆ ಸಿಎಂ ಮರಳಿದಾಗ, ಇಲ್ಲಿ ಶಂಕ್ರಮ್ಮ ಎಂಬ ಮಹಿಳೆಯೊಬ್ಬರು ಹಸುಗೂಸನ್ನು ಎತ್ತಿಕೊಂಡು ಮುಖ್ಯಮಂತ್ರಿಯವರಲ್ಲಿ ಸಹಾಯ ಕೋರಲು ನಿಂತುಕೊಂಡಿದ್ದರು. ವಿಚಾರಿಸಿದಾಗ ಆಕೆಯ ಮಗಳು ದೃಷ್ಟಿದೋಷ ಮತ್ತು ಮೆದುಳು ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ಅದಕ್ಕಾಗಿ ಲಕ್ಷಾಂತರ ರೂಪಾಯಿ ಅಗತ್ಯವಿದ್ದರಿಂದ ಕಂಗಾಲಾಗಿ ಸಿಎಂ ಮನೆ ಬಳಿ ಬಂದಿರುವುದು ತಿಳಿದುಬಂತು.
ಶಂಕ್ರಮ್ಮನ ಮನವಿಗೆ ಕೂಡಲೇ ಸ್ಪಂದಿಸಿದ ಮುಖ್ಯಮಂತ್ರಿ, ಚಿಕಿತ್ಸೆಗೆ ನೆರವು ನೀಡುವ ಭರವಸೆ ಕೊಟ್ಟರು. ಅಲ್ಲದೆ ಎರಡು ತಾಸಿನೊಳಗೆ ಮುಖ್ಯಮಂತ್ರಿ ಪರಿಹಾರ ನಿಧಿ ಶಾಖೆಯಿಂದ ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ಪತ್ರ ಬರೆದು, ಹಸುಗೂಸಿನ ಚಿಕಿತ್ಸೆ ಉಚಿತವಾಗಿ ನಡೆಸಲು ವ್ಯವಸ್ಥೆ ಮಾಡಲಾಯಿತು. ಮಗುವಿಗೆ ಸಂಪೂರ್ಣವಾದ ಚಿಕಿತ್ಸೆ ನೀಡಿದ ನಂತರ ಸರ್ಕಾರಕ್ಕೆ ಬಿಲ್ ಸಲ್ಲಿಸುವಂತೆ ಪತ್ರಮುಖೇನ ಆಸ್ಪತ್ರೆಯವರಿಗೆ ಸಿಎಂ ಸೂಚಿಸಿದ್ದಾರೆ.
ಟೆಲಿಗ್ರಾಂ ಆ್ಯಪ್ ಕೂಡ ಈಗ ಡಬಲ್ ಇಂಜಿನ್!; ಎಲ್ಲ ದುಪ್ಪಟ್ಟು, ಏನದು ಹೊಸ ಅಪ್ಡೇಟ್ಸ್?