ಹಾಸನ: ಹಾಸನದಲ್ಲಿ ರಾಜಕೀಯ ದ್ವೇಷ ತಾರಕಕ್ಕೇರಿದ್ದು, ಬಿಜೆಪಿ ಕಾರ್ಯಕರ್ತನ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿರುವ ಘಟನೆ ಅರಸೀಕೆರೆ ತಾಲೂಕಿನ ಕಣಕಟ್ಟೆ ರಾಂಪುರ ಗ್ರಾಮದಲ್ಲಿ ನಡೆದಿದೆ.
ರಾಂಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಹಾಗೂ ಬೆಂಬಲಿಗರ ವಿರುದ್ಧ ಕಲ್ಲು ತೂರಾಟ ನಡೆಸಿರುವ ಆರೋಪ ಕೇಳಿಬಂದಿದೆ. ಬಿಜೆಪಿ ಮುಖಂಡ ಶೇಖರ್ ಮನೆ ಮೇಲೆ ದಾಳಿ ಮಾಡಿದ್ದಾರೆನ್ನಲಾಗಿದೆ. ಕಲ್ಲು ತೂರಾಟಕ್ಕೆ ಮನೆಯ ಕಿಟಕಿ ಮತ್ತು ಕಾರಿನ ಗಾಜು ಪುಡಿ ಪುಡಿಯಾಗಿದ್ದು, ಬೈಕ್ ಸಹ ಜಖಂಗೊಂಡಿದೆ. ಕಲ್ಲಿನ ತೂರಾಟಕ್ಕೆ ಮನೆಯಲ್ಲಿ ಚಿಕ್ಕ ಮಕ್ಕಳು ಬೆಚ್ಚಿಬಿದ್ದಿದ್ದಾರೆ.
ಶೇಖರ್ ಅವರು ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಜತೆ ಗುರುತಿಸಿಕೊಂಡಿದ್ದರು ಎಂಬ ಕಾರಣಕ್ಕೆ ದಾಳಿ ಮಾಡಲಾಗಿದೆ. ಸರಿಯಾದ ಸಮಯಕ್ಕೆ ಪೊಲೀಸ್ ಬಾರದೆ ಹೋಗಿದ್ದರೆ ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಹಚ್ಚಲು ಮುಂದಾಗಿದ್ದರು ಎನ್ನಲಾಗಿದೆ.
ಇದನ್ನೂ ಓದಿರಿ: ವಾಸ್ತವ ತೆರೆದಿಟ್ಟಿತು ರವಿ ಡಿ. ಚನ್ನಣ್ಣನವರ್ ಲೇಖನ: ಜನಮತ
ಸದ್ಯ ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ಮೂಡಿದೆ. ಶಾಸಕ ಶಿವಲಿಂಗೇಗೌಡರ ಕುಮ್ಮಕ್ಕಿನಿಂದಲೇ ಈ ಘಟನೆ ನಡೆಯಲು ಸಾಧ್ಯ ಎಂದು ಶೇಖರ್ ಮನೆಯವರು ಆರೋಪಿಸಿದ್ದಾರೆ.
ಘಟನೆ ಬೆನ್ನಲ್ಲೇ ಫೆಸ್ಬುಕ್ ಲೈವ್ ಮಾಡಿರುವ ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಘಟನೆಗೆ ಬಿಜೆಪಿಯಾಗಲಿ ಅಥವಾ ಜೆಡಿಎಸ್ ಆಗಲಿ ಕಾರಣವಲ್ಲ. ಅವರ ಜಮೀನು ವಿಚಾರಕ್ಕೆ ಈ ಗಲಾಟೆ ನಡೆದಿದೆ. ತಪ್ಪು ಮಾಡಿದವನು ಯಾರೇ ಇದ್ದರೂ ಕ್ರಮ ಕೈಗೊಳ್ಳಲಿ ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್)
ಕಾಲೆಳೆಯಲು ಬಂದ ಪಾಕ್ ಪತ್ರಕರ್ತನಿಗೆ ವೆಂಕಟೇಶ್ ಪ್ರಸಾದ್ ದಿಟ್ಟ ತಿರುಗೇಟು!