ಚಂಡೀಗಢ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪಂಜಾಬ್ ವಿಧಾನಸಭೆ ವಿರೋಧಿಸಿ ನಿರ್ಣಯ ಅಂಗೀಕರಿಸಿತು.
ಕಾಯ್ದೆ ವಿರುದ್ಧ ವಿಧಾನ ಸಭೆಯಲ್ಲಿ ನಿರ್ಣಯ ಅಂಗೀಕರಿಸಿದ ಪಂಜಾಬ್ 2ನೇ ರಾಜ್ಯವಾಗಿದೆ. ಕೇರಳ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸಿದ ರಾಷ್ಟ್ರದ ಮೊದಲ ರಾಜ್ಯವಾಗಿದೆ.
ನಿರ್ಣಯವು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ರಾಷ್ಟ್ರವನ್ನು ಧರ್ಮದ ಆಧಾರದ ಮೇಲೆ ವಿಭಜನೆ ಮಾಡುತ್ತದೆ. ಪ್ರತಿಯೊಬ್ಬ ನಾಗರಿಕನಿಗೆ ಸಮಾನತೆಯನ್ನು ಕಲ್ಪಿಸುವುದು ನಮ್ಮ ಸಂವಿಧಾನ ಮೂಲ ಧ್ಯೇಯ. ಆದರೆ ಕಾಯ್ದೆ ಸಮಾನತೆಗೆ ವಿರುದ್ಧವಾಗಿದೆ. ಹೀಗಾಗಿ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸಲಾಗಿದೆ .
ಕಾಯ್ದೆ ಧರ್ಮದ ಆಧಾರದಲ್ಲಿ ತಾರತಮ್ಯದ ಪೌರತ್ವ ನೀಡುತ್ತದೆ. ಕಾಯ್ದೆ ಕೆಲವು ವರ್ಗಗಳ ಭಾಷೆ ಮತ್ತು ಸಾಂಸ್ಕೃತಿಕ ಗುರುತನ್ನು ಅಪಾಯಕ್ಕೆ ತಳ್ಳುವ ಸಾಧ್ಯತೆ ಇದೆ. ಹೀಗಾಗಿ ಕಾಯ್ದೆಯ ವಿರುದ್ಧ ನಿರ್ಣಯ ಅಂಗೀಕರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ವಿಧಾನಸಭೆಯಲ್ಲಿ ಮಂಡಿಸಿದ ನಿರ್ಣಯಕ್ಕೆ ಆಮ್ ಆದ್ಮಿ ಪಕ್ಷ ಮತ್ತು ಲೋಕ ಇನ್ಸಾಫ್ ಪಕ್ಷದ ಶಾಸಕರು ಬೆಂಬಲ ನೀಡಿದರು.
ವಿರೋಧ ಪಕ್ಷ ಬಿಜೆಪಿ ನಿರ್ಣಯವನ್ನು ತೀವ್ರವಾಗಿ ವಿರೋಧಿಸಿತು. ಬಿಜೆಪಿ ಮಿತ್ರ ಪಕ್ಷ ಶಿರೋಮಣಿ ಅಕಾಲಿ ದಳ ನಿರ್ಣಯ ವಿರೋಧಿಸಿತು. ಅಲ್ಲದೆ ಕಾಯ್ದೆಯಲ್ಲಿ ಕೆಲವು ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿತು.
ವಿಧಾನಸಭೆಯಲ್ಲಿ ಮಂಡಿಸಿದ ನಿರ್ಣಯವನ್ನು ನಾವು ವಿರೋಧಿಸುತ್ತೇವೆ. ಆದರೆ ಕಾಯ್ದೆಯ ಅರ್ಹ ಸಮುದಾಯಗಳ ಪಟ್ಟಿಯಲ್ಲಿ ಮುಸ್ಲಿಮರನ್ನು ಸೇರಿಸಬೇಕು ಎಂಬುದು ನಮ್ಮ ಅಭಿಪ್ರಾಯ ಎಂದು ಎಸ್ಎಡಿ ಶಾಸಕಾಂಗ ಪಕ್ಷದ ನಾಯಕ ಶರಣಜಿತ್ ಸಿಂಗ್ ದಿಲ್ಲೋನ್ ಹೇಳಿದರು. (ಏಜೆನ್ಸೀಸ್)