ಮಂಗಳೂರು: ಚುಟುಕು ಸಾಹಿತ್ಯ ಓದುಗರಲ್ಲಿ ಬಹಳಷ್ಟು ಆಸಕ್ತಿ ಮತ್ತು ಪ್ರೀತಿಯನ್ನು ಉಂಟು ಮಾಡುತ್ತಿದೆ. ಈ ನಿಟ್ಟಿನಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಬಹಳಷ್ಟು ಮುತುವರ್ಜಿಯಿಂದ ಕೆಲಸ ಮಾಡುತ್ತಿದೆ. ಸಾಹಿತ್ಯ ಕ್ಷೇತ್ರದಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಸದ್ದೆಬ್ಬಿಸುತ್ತಿದೆ. ಇದೊಂದು ಉತ್ತಮ ಬೆಳವಣಿಗೆ ಎಂದು ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಇರಾ ಸೋಮನಾಥೇಶ್ವರ ದೇವಸ್ಥಾನದಲ್ಲಿ ಇರಾ ಆಚಿಬೈಲು ಪೃಥ್ವಿರಾಜ್ ಸ್ಮರಣಾರ್ಥ ಕಲ್ಲಾಡಿ ವಿಠಲ ಶೆಟ್ಟಿ ವೇದಿಕೆಯಲ್ಲಿ ಚುಟುಕು ಸಂಭ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಚುಟುಕು ಸಾಹಿತ್ಯ ಪರಿಷತ್ ದ.ಕ. ಜಿಲ್ಲಾ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಗೋಪಾಲಕೃಷ್ಣ ಶಾಸ್ತ್ರಿಯವರ ‘ಚುಟುಕು ಬಂಡಿ’ ಚುಟುಕು ಕವನ ಸಂಕಲನವನ್ನು ಮಂಗಳೂರು ವಿ.ವಿ ಕನ್ನಡ ವಿಭಾಗ ಮುಖ್ಯಸ್ಥ ಡಾ.ಮಾಧವ ಎಂ.ಕೆ ಬಿಡುಗಡೆಗೊಳಿಸಿದರು. ಡಾ.ಸುಭೋದ್ ಭಂಡಾರಿ, ಸುಂದರ ಸುವರ್ಣ, ಕಾರ್ಕಳ ಠಾಣೆ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಭಾಗವಹಿಸಿದ್ದರು.
ಚುಸಾಪ ದಕ್ಷಿಣ ಕನ್ನಡ ಜಿಲ್ಲಾ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ಸ್ವಾಗತಿಸಿದರು. ಲತೀಶ್ ವಂದಿಸಿದರು. ಅಶೋಕ ಕಡೇಶಿವಾಲಯ, ಶ್ರೀಕಲಾ ಕಾರಂತ ನಿರೂಪಿಸಿದರು.
ಬಳಿಕ ನಡೆದ ಕವಿಗೋಷ್ಠಿ ಅಧ್ಯಕ್ಷತೆಯನ್ನು ಕವಿ ರಘು ಇಡ್ಕಿದು ವಹಿಸಿದ್ದರು. ರೇಮಂಡ್ ಡಿ’ಕುನ್ಹ, ಬಂಟ್ವಾಳ ತಾಲೂಕು ಚುಸಾಪ ಅಧ್ಯಕ್ಷ ಆನಂದ ರೈ ಅಡ್ಕಸ್ಥಳ ಉಪಸ್ಥಿತರಿದ್ದರು. 40 ಮಂದಿ ಕವಿ, ಕವಯಿತ್ರಿಯರು ಕವನ ವಾಚಿಸಿದರು. ಯೋಗೀಶ್ ಮಲ್ಲಿಗೆ ಮಾಡು ನಿರೂಪಿಸಿದರು.
ಇತ್ತೀಚಿನ ದಿನಗಳಲ್ಲಿ ಚುಟುಕು ಪ್ರಕಾರ ಓದುಗರೆಡೆಯಲ್ಲಿ ಜನಪ್ರಿಯತೆ ಪಡೆಯುತ್ತಿದೆ. ಚುಟುಕು ಎಂದರೆ ಮೂಗು ಮುರಿಯುತ್ತಿದ್ದ ಕಾಲದಲ್ಲಿ ಚುಟುಕು ಸಾಹಿತ್ಯ ಪರಿಷತ್ ಹುಟ್ಟಿಕೊಂಡಿದ್ದು, ಸುಮಾರು 40 ವರ್ಷಗಳಿಂದ ನಿರಂತರವಾಗಿ ಚುಟುಕನ್ನು ಬೆಳೆಸುತ್ತಾ ಬಂದಿದೆ.
-ಹರೀಶ್ ಸುಲಾಯ ಒಡ್ಡಂಬೆಟ್ಟು,
ಅಧ್ಯಕ್ಷ, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್