ಚಿತ್ರದುರ್ಗ: ಮಾವಿನಹಳ್ಳಿ ಬಸವೇಶ್ವರ ಸ್ವಾಮಿ ರಥೋತ್ಸವದ ಅಂಗವಾಗಿ ತಾಲೂಕಿನ ಭೀಮಸಮುದ್ರ ಸಮೀಪದ ಬಸವಾಪುರದಲ್ಲಿ ಬುಧವಾರ ಹೂವಿನ ಉತ್ಸವ ಹಾಗೂ ಕೆಂಡಾರ್ಚನೆ ಸೇವೆ ನಡೆಯಿತು.
ಬೆಳಗ್ಗೆ 10 ಗಂಟೆಗೆ ಪ್ರಾರಂಭವಾದ ಕೆಂಡಾರ್ಚನಾ ಕಾರ್ಯಕ್ರಮದಲ್ಲಿ ದೇವಾಲಯದಿಂದ ಸ್ವಾಮಿ ಉತ್ಸವ ಮೂರ್ತಿ ಇದ್ದ ಹೂವಿನ ಪಲ್ಲಕ್ಕಿ ಮೆರವಣಿಗೆ ದೇವಾಲಯದಿಂದ ಸ್ವಾಮಿ ಗದ್ದುಗೆ ಸುತ್ತು ಹಾಕಿತು. ಅಲ್ಲಿ ಪೂಜೆ ಬಳಿಕ ದೇವಾಲಯ ಆವರಣದಲ್ಲಿ ಭಕ್ತರು ಸ್ವಾಮಿಗೆ ಕೆಂಡಾರ್ಚನೆ ಸೇವೆ ಸಲ್ಲಿಸಿದರು.
ಮೆರವಣಿಗೆಯಲ್ಲಿ ದಾರಿಯುದ್ದಕ್ಕೂ ಪುರವಂತರು ವೀರಭದ್ರನ ಮಹಿಮೆ ತಿಳಿಸಿದರು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ಸ್ವಾಮಿಗೆ ಜಯಕಾರ ಕೂಗಿದರು.
ಮಾ.5ರ ಸಂಜೆ 5 ಗಂಟೆಗೆ ಸ್ವಾಮಿ ರಥೋತ್ಸವವು ನಡೆಯಲಿದ್ದು, 6ರ ಸಂಜೆ 5 ಗಂಟೆಗೆ ಕಂಕಣ ವಿಸರ್ಜನೆ ಕಾರ್ಯಕ್ರಮದೊಂದಿಗೆ ರಥೋತ್ಸವ ಸಮಾಪನಗೊಳ್ಳಲಿದೆ.