ಚಿತ್ರದುರ್ಗ: ನಗರ ಠಾಣೆ ಆವರಣದಲ್ಲಿ ಶುಕ್ರವಾರ ಶ್ರೀ ಕಣಿವೆಮಾರಮ್ಮ ದೇವಿ ಜಾತ್ರೆಯ ಅಂಗವಾಗಿ ದೇವಿಗೆ ವಿಶೇಷ ಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಠಾಣೆ ಆವರಣ ಕಣಿವೆ ಮಾರಮ್ಮ ದೇವಿಗೆ ವಿವಿಧ ಬಗೆ ಹೂವು ಹಾಗೂ ಹಾರ, ಬೆಳ್ಳಿ, ಬಂಗಾರದ ಆಭರಣಗಳಿಂದ ದೇವಿಯನ್ನು ಅಲಂಕರಿಸಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.
ಎಸ್ಪಿ ಉದ್ಘಾಟನೆ: ಠಾಣೆ ಆವರಣದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಎಸ್ಪಿ .ಜಿ.ರಾಧಿಕಾ ಬಳಿಕ ತಾಲೂಕು ಕಚೇರಿ ಬಳಿ ಏರ್ಪಡಿಸಿದ್ದ ಅನ್ನಸಂತರ್ಪಣೆ ಕಾರ್ಯಕ್ಕೆ ಚಾಲನೆ ನೀಡಿದರು. ಎಎಸ್ಪಿ ಎಂ.ಬಿ.ನಂದಗಾವಿ, ಡಿವೈಎಸ್ಪಿ ಪಾಂಡುರಂಗ, ಪಿಐಗಳಾದ ಟಿ.ಎಂ.ನಯೀಂ ಅಹಮ್ಮದ್, ಪ್ರಕಾಶ್ ಮತ್ತಿತರ ಪೊಲೀಸ್ ಅಧಿಕಾರಿಗಳು ಇದ್ದರು.
ಕುಂಚಿಗನಾಳ್: ಜಾತ್ರೆ ಅಂಗವಾಗಿ ನಗರ ಸೇರಿ ಸುತ್ತಮುತ್ತಲಿನ ಸಾವಿರಾರು ಭಕ್ತರು ಕುಂಚಿಗನಾಳ್ ಶ್ರೀ ಕಣಿವೆ ಮಾರಮ್ಮ ದೇವಿಗೆ ಪೂಜೆ ಸಲ್ಲಿಸಿದರು. ಸಂಜೆ ಸಿಡಿ ಉತ್ಸವ ಜರುಗಿತು.