ಚಿತ್ರದುರ್ಗ: ಜಿಲ್ಲೆಯ ವಿವಿಧ ಉತ್ಪನ್ನ ಹಾಗೂ ಬೆಳೆಗಳ ರಫ್ತಿಗೆ ವಿಫುಲ ಅವಕಾಶಗಳಿದ್ದು, ಈ ಕುರಿತಂತೆ ಡಿಸೆಂಬರ್ 31ರೊಳಗೆ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಫ್ತು ಉತ್ತೇಜನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದನ್ನು ಮಾಡಬಹುದು ಎಂಬುದರ ಕುರಿತಂತೆ ಪ್ರತಿ ಇಲಾಖೆಯೂ ಪ್ರಸ್ತಾವನೆ ಸಲ್ಲಿಸಬೇಕು ಎಂದರು.
ಮಧ್ಯವರ್ತಿಗಳಿಗೆ ಅವಕಾಶ ಮಾಡಿಕೊಡದೇ ನೇರ ರಫ್ತಿಗೆ ಅವಕಾಶ ಕಲ್ಪಿಸಬೇಕು. ಇದರಿಂದ ಚಿತ್ರದುರ್ಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗುವುದರ ಜತೆ ಮಾದರಿ ಜಿಲ್ಲೆಯಾಗಿ ಹೊರ ಹೊಮ್ಮಲು ಸಾಧ್ಯವಿದೆ ಎಂದು ತಿಳಿಸಿದರು.
ಕೃಷಿ ಮತ್ತು ತೋಟಗಾರಿಕೆಯ ವಿಶೇಷ ಬೆಳೆಗಳನ್ನು ಗಮನಿಸಿದರೆ ಜಿಲ್ಲೆಯಲ್ಲಿ ಅಗ್ರಿ ಟೂರಿಸ್ಂ ಗೆ ಅವಕಾಶವಿದೆ. ಇದರೊಂದಿಗೆ ಕೃಷಿಯಲ್ಲಿ ಸಾಧನೆ ಮಾಡಿದ ಸಾಧಕರ ಪರಿಚಯವನ್ನೂ ಮಾಡಿಕೊಡಬಹುದು. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಅಧಿಕಾರಿಗಳು ಗಮಗಹರಿಸಬೇಕು ಎಂದರು.
ದಾಳಿಂಬೆ, ಶೇಂಗಾ, ಸಿರಿಧಾನ್ಯಗಳ ಸಹಿತ ವಿವಿಧ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು, ಸಿದ್ಧ ವಸ್ತುಗಳು, ಮೊಳಕಾಲ್ಮೂರು ರೇಷ್ಮೆ ಸೀರೆ, ಈರುಳ್ಳಿ, ಹೈನುಗಾರಿಕೆ ಉತ್ಪನ್ನಗಳು, ಮಾಂಸ ಸಂಸ್ಕರಣೆ, ಮಿಡಿ ಸೌತೆ ಇತ್ಯಾದಿಗಳಿಗೆ ಇರುವ ಅವಕಾಶ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು.
ಉಪವಿಭಾಗಾಧಿಕಾರಿ ವಿ.ಪ್ರಸನ್ನ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ವಿ.ಸದಾಶಿವ, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಕೃಷ್ಣಪ್ಪ, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿನಿರ್ದೇಶಕ ಆನಂದ್ ಹಾಗೂ ಲೀಡ್ ಬ್ಯಾಂಕ್, ಕೈಗಾರಿಕೆ ಸಹಿತ ನಾನಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.