ಚೆನ್ನೈ: ಕಾಲಿವುಡ್ ಖ್ಯಾತ ಕಿರುತೆರೆ ಕಲಾವಿದೆ ಹಾಗೂ ವಿಡಿಯೋ ಜಾಕಿ ಚಿತ್ರಾ ಅವರ ದಿಢೀರ್ ಸಾವು ಸಾಕಷ್ಟು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ರಾತ್ರಿ ಶೂಟಿಂಗ್ ಮುಗಿಸಿ ಬಂದವರು ಬೆಳಗಾಗುವಷ್ಟರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಕುಟುಂಬ, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ಶಾಕ್ ಆಗಿದ್ದು, ಸಾವಿನ ತನಿಖೆಗೆ ಆಗ್ರಹಿಸಿದ್ದಾರೆ.
ಚಿತ್ರಾರ ಶವಪರೀಕ್ಷೆಯಲ್ಲಿ ಆತ್ಮಹತ್ಯೆ ಎಂಬುದು ಖಚಿತವಾಗಿದ್ದು, ಕಳೆದ ಗುರುವಾರ ಸಂಜೆ ಅವರ ಅಂತ್ಯಕ್ರಿಯೆಯು ನೆರವೇರಿದೆ. ಗಂಡ ಹೇಮಂತ್ ನಡತೆಯ ಮೇಲೆ ಚಿತ್ರಾರ ತಾಯಿಗೆ ಅನುಮಾನ ಬಂದಾಗಿನಿಂದ ಆತನಿಂದ ದೂರವಾಗವಂತೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಚಿತ್ರಾ ಒತ್ತಡಕ್ಕೆ ಸಿಲುಕಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿತ್ತು.
ಮದ್ಯ ವ್ಯಸನಿಯಾಗಿದ್ದ ಹೇಮಂತ್, ಚಿತ್ರಾ ವಿಚಾರದಲ್ಲಿ ಅತಿಯಾದ ಪೊಸೆಸಿವ್ನೆಸ್ ಇತ್ತಂತೆ. ಸೀರಿಯಲ್ಗಳಲ್ಲಿ ರೊಮ್ಯಾಂಟಿಕ್ ದೃಶ್ಯದಲ್ಲಿ ನಟನೆ ಮಾಡಿದರೆ ಶೂಟಿಂಗ್ ಸೆಟ್ನಲ್ಲಿ ಚಿತ್ರಾಳನ್ನು ಬೈಯುತ್ತಿದ್ದರು ಎಂದು ಈ ಹಿಂದೆ ವರದಿಯಾಗಿತ್ತು. ಇದೀಗ ಮತ್ತೊಂದು ವರದಿಯ ಪ್ರಕಾರ ರಾಜಕಾರಣಿಯೊಬ್ಬ ಚಿತ್ರಾರಿಗೆ ಕಿರುಕುಳ ನೀಡುತ್ತಿದ್ದರಂತೆ. 2021ನೇ ಹೊಸ ವರ್ಷವನ್ನು ತನ್ನೊಂದಿಗೆ ಆಚರಿಸುವಂತೆ ಚಿತ್ರಾರಿಗೆ ಬಲವಂತ ಮಾಡುತ್ತಿದ್ದರು. ಅಲ್ಲದೆ, ಅನೇಕ ಬಾರಿ ಮೊಬೈಲ್ ಕರೆ ಸಹ ಮಾಡಿದ್ದಾರೆಂದು ವರದಿಯಲ್ಲಿ ಉಲ್ಲೇಖವಾಗಿದೆ.
ಇದನ್ನೂ ಓದಿ: ಆಮೀರ್ ಖಾನ್ಗಾಗಿ ಒಂದು ದಿನ ಸಮಯ ನೀಡಲಿದ್ದಾರೆ ಸಲ್ಮಾನ್ ಖಾನ್: ಏಕಿರಬಹುದು?
ಅ. 21ರಂದು ಚಿತ್ರಾ ಅವರು ಉದ್ಯಮವೊಂದರ ಉದ್ಘಾಟನೆಗೆಂದು ಪೆರಂಬೂರ್ಗೆ ತೆರಳಿದ್ದರಂತೆ. ಇದೇ ವೇಳೆ ಆಡಳಿತಾರೂಢ ಪಕ್ಷದ ಶಾಸಕರೊಬ್ಬರು ಕಾರ್ಯಕ್ರಮಕ್ಕೆ ಆಗಮಿಸಿದ್ದು, ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಾಸಕ ನಾನು ಕಾರ್ಯಕ್ರಮದಲ್ಲಿ ಮಾತ್ರ ಆಕೆಯನ್ನು ಭೇಟಿ ಮಾಡಿದ್ದೆ. ಆ ಬಳಿಕ ಅವರೊಂದಿಗೆ ಮಾತನಾಡಿಯೇ ಇಲ್ಲ ಎಂದು ಹೇಳಿದ್ದಾರೆ.
ಇನ್ನು ಮತ್ತೊಂದು ವರದಿಯ ಪ್ರಕಾರ ಚಿತ್ರಾ ಉಳಿದುಕೊಂಡಿದ್ದ ಹೋಟೆಲ್ಗೆ ಓರ್ವ ಸಚಿವ ಭೇಟಿ ನೀಡಿದ್ದರಂತೆ. ಇದು ಕೂಡ ಚಿತ್ರಾ ಸಾವಿನ ಜತೆ ತಳುಕು ಹಾಕಿಕೊಂಡಿದೆ. ಆದರೆ, ಸಚಿವ ಜಯಕುಮಾರ್ ಇದನ್ನು ಅಲ್ಲಗೆಳೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಏನಾಗಿದೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಲಿದೆ ಎಂದು ಹೇಳಿದ್ದರು. (ಏಜೆನ್ಸೀಸ್)
ವಿಜೆ ಚಿತ್ರಾರ ದಿಢೀರ್ ಸಾವಿನ ಬೆನ್ನಲ್ಲೇ ಪಾಲಕರ ಆರೋಪ: ಪೊಲೀಸರ ಮುಂದೆ ಭಾವಿ ಪತಿಯ ಶಾಕಿಂಗ್ ಹೇಳಿಕೆ!