ಬೀಜಿಂಗ್: ಪ್ರಯಾಣಿಕರಿಂದ ತುಂಬಿದ್ದ ಬಸ್ ಅನ್ನು 52 ವರ್ಷದ ಚೀನಾ ಚಾಲಕನೊಬ್ಬ ಉದ್ದೇಶಪೂರ್ವಕವಾಗಿಯೇ ಸೇತುವೆಯಿಂದ ಜಲಾಶಯಕ್ಕೆ ನುಗ್ಗಿಸಿ ಪ್ರಯಾಣಿಕರ ಸಾವಿಗೆ ಕಾರಣವಾಗಿರುವ ಆತಂಕಕಾರಿ ಘಟನೆ ನಡೆದಿದೆ.
ವಿಚ್ಛೇದಿತ ಚಾಲಕನನ್ನು ಝಾಂಗ್ ಎಂದು ಗುರುತಿಸಲಾಗಿದೆ. ಕೃತ್ಯ ಎಸಗುವ ಮುನ್ನ ಝಾಂಗ್ ಪರಿಣಾಮಕಾರಿಯಾದ ಮದ್ಯ ಸೇವನೆ ಮಾಡಿದ್ದ ಎಂದು ಚೀನಾ ಪೊಲೀಸ್ ಅಧಿಕಾರಿಗಳು ಭಾನುವಾರ ಮಾಹಿತಿ ತಿಳಿಸಿದ್ದಾರೆ. ಚಾಲಕ ಸೇರಿದಂತೆ 21 ಮಂದಿ ಸಾವಿಗೀಡಾಗಿದ್ದು, ಇತರೆ 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಳೆದ ಮಂಗಳವಾರ ನೈರುತ್ಯ ಚೀನಾದ ಅನ್ಶುನ್ ನಗರದಲ್ಲಿ ಈ ಭಯಾನಕ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಭಾನುವಾರ ಚೀನಾ ಅಧಿಕಾರಿಗಳು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಝಾಂಗ್ ಮನೆಯನ್ನು ಸರ್ಕಾರ ಹೊಡೆದುರುಳಿಸಿದ ದ್ವೇಷಕ್ಕಾಗಿ ಉದ್ದೇಶಪೂರ್ಕವಾಗಿಯೇ ಬಸ್ ಅನ್ನು ಬೃಹತ್ ಕೆರೆಯೊಳಗೆ ನುಗ್ಗಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯದ ಪ್ರಕಾರ ಬಸ್ನಲ್ಲಿ ಒಟ್ಟು 36 ಪ್ರಯಾಣಿಕರಿದ್ದರು. ಬಸ್ ಅನ್ನು ಜುಲೈ 7ರಂದು ಕರೆಗೆ ನುಗ್ಗಿಸುವ ಮೊದಲು ಚಾಲಕ ಒನ್ವೇನಲ್ಲಿ ಎದುರಾಗಿ ವಾಹನ ಚಲಾಯಿಸಿದ್ದನು. ನಂತರ ಬಸ್ ಅನ್ನು ಕರೆಯೊಳಗೆ ಕೆಡವಿದ್ದನು. ಸುಮಾರು 15 ಮೀಟರ್ (50 ಅಡಿ) ಆಳದ ಕೆರೆಯಲ್ಲಿ 10 ಮೀಟರ್ (33 ಅಡಿ) ಆಳಕ್ಕೆ ಬಸ್ ಮುಳುಗಿತ್ತು.
ಸುಮಾರು 10 ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿ ಬಸ್ಸಿನಲ್ಲಿ 37 ಮಂದಿಯನ್ನು ಪತ್ತೆಹಚ್ಚಿದ್ದರು. ಅದರಲ್ಲಿ 21 ಮಂದಿ ಸ್ಥಳದಲ್ಲೇ ಸಾವಿಗೀಡಾಗಿರುವುದಾಗಿ ಘೋಷಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ 15 ಮಂದಿಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಗುಣಮುಖರಾಗಿದ್ದಾರೆ.
ಇದನ್ನೂ ಓದಿ: ಮುಂದುವರಿದ ಸುದೀಪ್ ಸಮಾಜಮುಖಿ ಕಾರ್ಯ: 4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದ ಕಿಚ್ಚ
ಚಾಲಕನ ವರ್ತನೆ ಸರಿಯೇ?
52 ವರ್ಷದ ಚಾಲಕ ಝಾಂಗ್ ತನ್ನ ಜೀವನದಲ್ಲಿ ತುಂಬಾ ಅಸಂತೋಷನಾಗಿದ್ದ. ಬಾಡಿಗೆಗೆ ಪಡೆದಿದ್ದ ಸರ್ಕಾರಿ ಸ್ವಾಮ್ಯದ ಕಟ್ಟಡವನ್ನು ನೆಲಸಮ ಮಾಡಿದ್ದಕ್ಕೆ ದುಃಖಿತನಾಗಿದ್ದ. ಮನೆಯು ನೆಲಸಮವಾಗುವುದನ್ನು ನೋಡಿ, ದೂರು ನೀಡಲು ಪೊಲೀಸ್ ಅಧಿಕಾರಿಗಳ ಮೊರೆ ಹೋಗಿದ್ದನು. ಆದರೆ, ಜೂನ್ನಲ್ಲಿ ಸರ್ಕಾರಿ ಸ್ವಾಮ್ಯದ ಮನೆ ಉರುಳಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದ ಝಾಂಗ್ಗೆ 72 ಸಾವಿರ ಯಾನ್ (7,73,406 ರೂ.) ಪರಿಹಾರ ನೀಡಲು ತೀರ್ಮಾನವಾಗಿತ್ತು. ಆದರೆ, ಅದನ್ನು ಪಡೆಯುವ ಮುನ್ನವೇ ಝಾಂಗ್ ಪ್ರಾಣ ಬಿಟ್ಟಿದ್ದು, ತನ್ನ ದುರುದ್ದೇಶಕ್ಕೆ ಉಳಿದ ಪ್ರಯಾಕರ ಸಾವಿಗೂ ಕಾರಣವಾಗಿದ್ದಾನೆ.
ಘಟನೆಗೂ ಮುನ್ನ ಬಸ್ಸಿನಲ್ಲಿ ಯಾವುದೇ ಲೋಪದೋಷಗಳು ಇರಲಿಲ್ಲ ಎಂಬುದು ಖಚಿತವಾಗಿದೆ. ಅಲ್ಲದೆ, ಮರಣೋತ್ತರ ಪರೀಕ್ಷೆಯಲ್ಲೂ ಝಾಂಗ್ ಮದ್ಯ ಸೇವಿಸಿರುವು ದೃಢಪಟ್ಟಿದೆ. ಚಾಲಕ ಕೃತ್ಯಕ್ಕೆ ಚೀನಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಖಂಡನೆ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್)
(ವಿಡಿಯೋ ಕೃಪೆ: ಡೈಲಿ ಮೇಲ್)
ಪ್ರಧಾನಿ ಮೋದಿ ಡ್ರೋನ್ ಪ್ರತಾಪ್ರನ್ನು ಡಿಆರ್ಡಿಒ ವಿಜ್ಞಾನಿಯಾಗಿ ನೇಮಿಸಿದ್ರಾ? ಏನಿದರ ಸತ್ಯಾಂಶ?