ಸವಣೂರ: ನಿಮ್ಮೆಲ್ಲರ ಆಶೀರ್ವಾದದಿಂದ ಮುಖ್ಯಮಂತ್ರಿ ಆಗಿದ್ದೇನೆ. ಕಳೆದ 15 ವರ್ಷಗಳಿಂದ ಈ ಕ್ಷೇತ್ರದ ಅಭಿವೃದ್ಧಿ ಕೈಗೊಳ್ಳಲು ಅವಕಾಶ ಲಭಿಸಿದೆ.
ನಂಜುಂಡಪ್ಪ ವರದಿಯಲ್ಲಿ ರಾಜ್ಯದಲ್ಲಿ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ತೊಡೆದು ಹಾಕಲಾಗಿದೆ. ಇದೀಗ ಶಿಗ್ಗಾಂವಿ- ಸವಣೂರ ತಾಲೂಕುಗಳು ಅಭಿವೃದ್ಧಿಶೀಲ ತಾಲೂಕುಗಳಾಗಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ರೋಡ್ ಶೋನಲ್ಲಿ ನಂತರ ಬುಧವಾರ ಪೇಟೆ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ವೃತ್ತದಲ್ಲಿ ಬಹಿರಂಗವಾಗಿ ಮತಯಾಚಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸವಣೂರ- ಶಿಗ್ಗಾವಿ ಏತ ನೀರಾವರಿ
ಸವಣೂರ ಪಟ್ಟಣದ ಮೋತಿ ತಲಾಬ ಕೆರೆ ತುಂಬಿಸುವ ಮೂಲಕ ಆರಂಭಗೊಂಡು, ಸವಣೂರ- ಶಿಗ್ಗಾವಿ ಏತ ನೀರಾವರಿ ಮೂಲಕ ತಾಲೂಕಿನ 120 ಕೆರೆಗಳನ್ನು ತುಂಬಿಸುವ ಕಾರ್ಯ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಿದ್ದರೆ ಇದು ಸಾಧ್ಯವಾಗುತ್ತಿತ್ತಾ ಎಂದು ಜನರನ್ನು ಪ್ರಶ್ನಿಸಿದರು.
ಶಿಗ್ಗಾವಿ, ಸವಣೂರ ಹಾಗೂ ಬಂಕಾಪುರ ರಸ್ತೆಗಳು ರಾಷ್ಟ್ರೀಯ ಹೆದ್ದಾರಿಯ ರೀತಿಯಲ್ಲಿ ನಿರ್ಮಿಸಲಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮೋತಿ ತಲಾಬ ತುಂಬಿಸಲು ಹಲವಾರು ಹೋರಾಟ ಕೈಗೊಳ್ಳಲಾಗಿತ್ತು.
ಇದೀಗ ಕೆರೆ ತುಂಬಿಸುವ ಕಾರ್ಯ ಬಿಜೆಪಿ ಸರ್ಕಾರದಲ್ಲಾಗಿದೆ. ಮುಂಬರುವ ದಿನಗಳಲ್ಲಿ ಪಟ್ಟಣದ ಪ್ರತಿ ವಾರ್ಡ್ಗಳಲ್ಲಿ ದಿನದ 24 ಗಂಟೆ ನೀರು ಪೂರೈಸಲು 27 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದರು.