ಎನ್.ಆರ್.ಪುರ: ಅಧಿಕಾರಿಗಳು ಅತಿವೃಷ್ಟಿ ಹಾನಿ ಸ್ಥಳಕ್ಕೆ ಭೇಟಿ ನೀಡಿ ಮನೆ, ಬೆಳೆ, ಜಾನುವಾರು ಹಾನಿಯಾಗಿರುವ ಮಾಹಿತಿ ಕಲೆಹಾಕಿ ನೈಜ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ತರೀಕೆರೆ ಉಪವಿಭಾಗಾಧಿಕಾರಿ ಕಾಂತರಾಜ್ ಸೂಚಿಸಿದರು.
ತಾಪಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಅತಿವೃಷ್ಟಿ ಮುನ್ನೆಚ್ಚರಿಕೆ ಕ್ರಮದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಮಳೆಯಿಂದ ಯಾವುದೇ ಹಾನಿ ಸಂಭವಿಸಿದಾಗ ಸಹಾಯಕ್ಕಾಗಿ ಸರ್ಕಾರಿ ಎಲ್ಲ ಕಚೇರಿಗಳಲ್ಲಿ ಕಂಟ್ರೋಲ್ ರೂಂ ತೆರೆಯಬೇಕು. ರಾತ್ರಿ- ಹಗಲು ಎರಡೂ ಪಾಳಿಗಳಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿ ನಿಯೋಜಿಸಬೇಕು. ಟೋಲ್ ಫ್ರೀ ನಂಬರ್ ಕುರಿತು ವ್ಯಾಪಕ ಪ್ರಚಾರ ನಡೆಸಬೇಕು ಎಂದು ನಿರ್ದೇಶನ ನೀಡಿದರು.
ಅತಿವೃಷ್ಟಿ ಪರಿಸ್ಥಿತಿ ಎದುರಿಸಲು ಇಲಾಖೆಗಳಿಗೆ ಬೇಕಿರುವ ಸೌಲಭ್ಯಗಳ ಕುರಿತು ತುರ್ತಾಗಿ ಪ್ರಸ್ತಾವನೆ ಸಲ್ಲಿಸಿ. ಮುಳುಗುತಜ್ಞರು ಹಾಗೂ ಉರಗ ತಜ್ಞರ ಮಾಹಿತಿ, ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸಿಟ್ಟುಕೊಳ್ಳಿ ಎಂದು ತಿಳಿಸಿದರು.
ಸಂತ್ರಸ್ತರಿಗೆ ತುರ್ತಾಗಿ ಪರಿಹಾರ ನೀಡಬೇಕು. ರೈತ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಪರಿಶೀಲಿಸಿ ತುರ್ತಾಗಿ ಎಫ್ಐಆರ್ ದಾಖಲಿಸಬೇಕು. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್ಗಳು ದುಸ್ಥಿತಿಯಲ್ಲಿರುವ ಹಳೇ ಸೇತುವೆಗಳು, ನೀರಿನ ರಭಸಕ್ಕೆ ಒಡೆದು ಹೋಗುವಂತಿರುವ ಕೆರೆ ದಂಡೆಗಳು, ಕೆರೆ ಕಟ್ಟೆಗಳ ಪಟ್ಟಿ ತಯಾರಿಸಿಟ್ಟುಕೊಳ್ಳಬೇಕು ಎಂದು ಪಿಆರ್ಇಡಿ ಎಇಇ ವೀರೇಶ್ ಅವರಿಗೆ ಸೂಚಿಸಿದರು.
ಆರೋಗ್ಯ ನಿರೀಕ್ಷಕ ಭಗವಾನ್, ಬಾಳೆಹೊನ್ನೂರು ಪಿಎಸ್ಐ ವಿ.ಟಿ.ದಿಲೀಪ್ಕುಮಾರ್ ಇಲಾಖಾವಾರು ಮಾಹಿತಿ ನೀಡಿದರು.