ಬೆಂಗಳೂರು: ಚೆಕ್ ಪೋಸ್ಟ್ಗಳಲ್ಲಿ ವಾಹನ ಚಾಲಕರಿಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ, ಸಿಬ್ಬಂದಿ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆಯ ಸಿಟಿಓ ಸೈಯದ್ ಮಹಮ್ಮದ್, ಕಾರು ಚಾಲಕ ಪಿ.ಕೃಷ್ಣಮೂರ್ತಿ ಮತ್ತು ಸಿಟಿಐ ಸಿ.ಎಂ. ಯಶವಂತ್ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಚಿನ್ನಾಭರಣ ಮತ್ತು ನಗದು ಪತ್ತೆಯಾಗಿದೆ. ಕಾರ್ಯಾಚರಣೆ ಮುಂದುವರಿದಿದೆ ಎಂದು ಎಸಿಬಿ ತಿಳಿಸಿದೆ.
ಬೆಂಗಳೂರು ನಗರ ಜಿಲ್ಲೆಯ ವಾಣಿಜ್ಯ ತೆರಿಗೆ ಇಲಾಖೆಯ ಕೆಲ ಅಧಿಕಾರಿಗಳು ದೇವನಹಳ್ಳಿ ಚೆಕ್ ಪೋಸ್ಟ್ ಮತ್ತು ಇನ್ನಿತ್ತರ ಸ್ಥಳಗಳಲ್ಲಿ ತಪಾಸಣೆ ನೆಪದಲ್ಲಿ ವಾಹನಗಳನ್ನು ತಡೆಯುತ್ತಿದ್ದಾರೆ. ಜಿಎಸ್ಟಿ ಬಿಲ್, ಇ-ವೇ ಬಿಲ್ ಇದ್ದರೂ ವಾಹನಗಳನ್ನು ದಿನಗಟ್ಟಲೇ ನಿಲ್ಲಿಸಿಕೊಂಡು ಸರಿಯಾದ ಸಮಯಕ್ಕೆ ಸರಕು ಡೆಲಿವರಿ ಕೊಡಲು ತೊಂದರೆ ಕೊಡುತ್ತಿದ್ದಾರೆ. ಈ ರೀತಿ ಕಿರುಕುಳ ನೀಡುವ ಮೂಲಕ ಲಂಚ ವಸೂಲಿ ಮಾಡುತ್ತಿದ್ದಾರೆ ಎಂಬ ದೂರು ಬಂದಿದ್ದವು. ಇದರ ಅನ್ವಯ ಪ್ರಕರಣ ದಾಖಲಿಸಿಕೊಂಡು ಗುರುವಾರ ಕಾರ್ಯಾಚರಣೆ ನಡೆಸಲಾಗಿದೆ.
ಸೈಯದ್ ಮಹಮ್ಮದ್ಗೆ ಸೇರಿದ ಬೆಂಗಳೂರಿನ ಮನೆ ಶೋಧ ನಡೆಸಿದ್ದು, 3.35 ಲಕ್ಷ ರೂ. ನಗದು, 384 ಗ್ರಾಂ ಚಿನ್ನಾಭರಣ, 1 ಕಾರು, 1 ಬೈಕ್ ಪತ್ತೆಯಾಗಿದೆ. ಅದೇ ರೀತಿ ಪಿ.ಕೃಷ್ಣಮೂರ್ತಿಗೆ ಸೇರಿದ ಬೆಂಗಳೂರಿನ ಮನೆಗೆ ಮೇಲೆ ದಾಳಿ ನಡೆಸಿದಾಗ 2,100 ರೂ. ನಗದು ಪತ್ತೆಯಾಗಿದೆ. ಸಿ.ಎಂ. ಯಶವಂತ್ಗೆ ಸೇರಿದ ಮೈಸೂರಿನ ಮನೆಯಲ್ಲಿ 50 ಗ್ರಾಂ ಚಿನ್ನಾಭರಣ, 1 ಕೆಜಿ ಬೆಳ್ಳಿ, ಆಸ್ತಿ ದಾಖಲೆ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೂಗಲ್ ಪೇ, ಪೋನ್ ಪೇನಲ್ಲಿ ಲಂಚ:
ಆರೋಪಿತ ವಾಣಿಜ್ಯ ತೆರಿಗೆ ಅಧಿಕಾರಿಗಳು ಚೆಕ್ಪೋಸ್ಟ್ಗಳಲ್ಲಿ ವಾಹನ ತಡೆದು ಚಾಲಕ, ಸರಕು ವಾರಸುದಾರರಿಂದ ಲಂಚವನ್ನು ಗೂಗಲ್ ಪೇ, ಪೋನ್ ಪೇ ಮೂಲಕ ಸ್ವೀಕರಿಸಿರುವುದು ಕಂಡುಬಂದಿದೆ. ಮೊಬೈಲ್ ವಶಕ್ಕೆ ಪಡೆದು ಎಸಿಬಿ ತನಿಖೆ ಮುಂದುವರಿಸಿದೆ.
ಹರ್ಷ ಹತ್ಯೆ ಬೆನ್ನಲ್ಲೇ ಶಿವಮೊಗ್ಗದಲ್ಲಿ ಹಿಂದೂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ!