ಕೊಡೇಕಲ್: ರಾಜ್ಯದ ಹಲವೆಡೆ ರಣಭೀಕರ ಮಳೆಯಾಗುತ್ತಿದ್ದು ಬಹುತೇಕ ನದಿಗಳು, ಜಲಾಶಯಗಳು ಉಕ್ಕಿ ಹರಿಯುತ್ತಿವೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಿವೆ. ಅಲ್ಲಲ್ಲಿ ಭೂಕುಸಿತ ಸಂಭವಿಸಿದ್ದು, ನದಿ ತೀರದ ಜನರು ಊರು ತೊರೆಯುತ್ತಿದ್ದಾರೆ. ಕೃಷಿಭೂಮಿಯೆಲ್ಲ ಕೆರೆಂತಾಗಿದೆ… ಈ ನಡುವೆ ದೇವಸ್ಥಾನಕ್ಕೂ ಜಲದಿಗ್ಬಂಧನವಾಗಿದೆ!
ಯಾದಗಿರಿ ಜಿಲ್ಲೆ ಬಸವಸಾಗರ ಜಲಾಶಯದಿಂದ ಅಪಾರ ಪ್ರಮಾಣದ ನೀರು ಕೃಷ್ಣಾ ನದಿಗೆ ಬಿಟ್ಟಿದ್ದರಿಂದ ಛಾಯಾ ಭಗವತಿ ದೇವಸ್ಥಾನ ಜಲಾವೃತಗೊಂಡಿದೆ. ಬಸವಸಾಗರದಿಂದ ಸೋಮವಾರ 2.77 ಲಕ್ಷ ಕ್ಯೂಸೆಕ್ ನೀರು ಕೃಷ್ಣೆಗೆ ಹರಿಸಿದ್ದರಿಂದ ಸುಪ್ರಸಿದ್ಧ ಛಾಯಾ ಭಗವತಿ ದೇವಸ್ಥಾನ ಜಲದಿಗ್ಬಂಧನವಾಗಿದ್ದು, ನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಇದನ್ನೂ ಓದಿರಿ ಸರ್ಕಾರ ನನಗೆ ಇನ್ನೂ ಪೊಲೀಸ್ ಭದ್ರತೆ ಕೊಟ್ಟಿಲ್ಲ; ಅಖಂಡ ಶ್ರೀನಿವಾಸ ಮೂರ್ತಿ
ಛಾಯಾ ಭಗವತಿ ದೇವಸ್ಥಾನದ ಗರ್ಭ ಗುಡಿಯೊಳಗೆ ನೀರು ಹೊಕ್ಕಿದ್ದರಿಂದ ಎದುರಿನ ಮಂಟಪ ಮುಳುಗಡೆಯಾಗಿದೆ. ಕಳೆದ ಆಗಸ್ಟ್ನಲ್ಲಿ ಪ್ರವಾಹದಿಂದ 7 ದಿನಕ್ಕೂ ಹೆಚ್ಚು ದೇಗುಲ ಪ್ರವಾಹದಲ್ಲಿ ಸಿಲುಕಿತ್ತು. ದೇವಸ್ಥಾನದ ಮೇಲ್ಭಾಗದಲ್ಲಿ ಚಿದಂಬರಭಟ್ಟ ಜೋಶಿ ಪೂಜೆ ನೆರವೇರಿಸಿದರು. ಗೃಹ ರಕ್ಷಕ ದಳದ ವೆಂಕಟೇಶ ಕುಲಕರ್ಣಿ ಇದ್ದರು.
ಆಲಮಟ್ಟಿ ಅಣೆಕಟ್ಟೆಗೆ ಒಳಹರಿವು ಹೆಚ್ಚಾಗಿದ್ದರಿಂದ 2.50 ಲಕ್ಷ ಕ್ಯೂಸೆಕ್ ನೀರು ಬಸವಸಾಗರಕ್ಕೆ ಬಿಟ್ಟಿದ್ದರಿಂದ ಒಳಹರಿವು ಹೆಚ್ಚಾಗಿದೆ. ಹೀಗಾಗಿ 27 ಮುಖ್ಯ ಗೇಟ್ಗಳ ಮೂಲಕ 2,77,810 ಕ್ಯೂಸೆಕ್ ನೀರು ಕೃಷ್ಣೆ ಒಡಲಿಗೆ ಹರಿಸಲಾಗಿದ್ದು, ತೀರದ ಗ್ರಾಮಸ್ಥರಿಗೆ ಆತಂಕ ಕಾಡುತ್ತಿದೆ. ಗರಿಷ್ಠ 33.313 ಟಿಎಂಸಿ ಸಂಗ್ರಹ ಸಾಮರ್ಥ್ಯದ ಬಸವಸಾಗರದಲ್ಲಿ ಸದ್ಯ 24.78 ಟಿಎಂಸಿ ನೀರು ಲಭ್ಯವಿದ್ದು, 490.21 ಮೀ. ನೀರಿದೆ.
ಕಾಂಗ್ರೆಸ್ ವಿರುದ್ಧ ಅಖಂಡ ಶ್ರೀನಿವಾಸ್ ಮೂರ್ತಿ ಆಕ್ರೋಶ… ಸುಟ್ಟಿರೋದು ನನ್ನ ಮನೆ, ಡಿಕೆಶಿಯದ್ದಲ್ಲ!