ಕೊಳ್ಳೇಗಾಲ: ತಾಲೂಕಿನ ಉಗನೀಯ ಗ್ರಾಮದಲ್ಲಿ ಶ್ರೀ ಭದ್ರಕಾಳಿ ಸಮೇತ ಶ್ರೀ ಹೊಸವಾಡಿ ವೀರಭದ್ರಸ್ವಾಮಿ ಕಲ್ಯಾಣೋತ್ಸವ ಹಾಗೂ ರಥೋತ್ಸವ ಮಂಗಳವಾರ ಸಾವಿರರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಶ್ರೀ ಹೊಸವಾಡಿ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಶ್ರೀ ಭದ್ರಕಾಳಿ ಸಮೇತ ಶ್ರೀ ಹೊಸವಾಡಿ ವೀರಭದ್ರಸ್ವಾಮಿ ಕಲ್ಯಾಣೋತ್ಸವ ಹಾಗೂ ರಥೋತ್ಸವ ಹಮ್ಮಿಕೊಳ್ಳಲಾಗಿತ್ತು. ಭಕ್ತರು ಸ್ವಾಮಿಯನ್ನು ಪ್ರತಿಷ್ಠಾಪಿಸಿದ್ದ ರಥವನ್ನು ಎಳೆದು ಭಕ್ತಿ ಮೆರೆದರು. ಸೋಮವಾರ ದೇವಾಲಯದ ಮೂಲ ದೇವರ ಸನ್ನಿಧಿಯಲ್ಲಿ ಪಂಚ ದ್ರವ್ಯಗಳಿಂದ ಅಭಿಷೇಕ, ರುದ್ರ ಪಾರಾಯಣ, ಮಹಾನಿವೇದನೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ, ಪೂಜಾ ಕೈಂಕರ್ಯಗಳು ಜರುಗಿದವು. ಉಗನೀಯ ಸುತ್ತಲ ಗ್ರಾಮಸ್ಥರು ಭಾಗಿಯಾಗಿದ್ದರು. ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.