ಚನ್ನಗಿರಿ: ಅಧಿಕಾರಿಗಳು ಹಾಗೂ ಜನರ ಸಹಕಾರ ಮತ್ತು ಸ್ಪಂದನೆಯಿಂದ ಚನ್ನಗಿರಿ ಕರೊನಾ ಮುಕ್ತ ತಾಲೂಕಾಗಿದೆ. ಮುಂದಿನ ದಿನಗಳಲ್ಲಿ ಜನರು ಎಚ್ಚರಿಕೆಯಿಂದಿರುವಂತೆ ಶಾಸಕ ಮಾಡಾಳು ವಿರೂಪಾಕ್ಷಪ್ಪ ತಿಳಿಸಿದರು.
ಸಂತೇಬೆನ್ನೂರು ಎಸ್ಎಸ್ಜೆವಿಪಿ ಶಾಲೆಯಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪೊಲೀಸ್ ಇಲಾಖೆ, ಸಾರ್ವಜನಿಕರ ಸಹಭಾಗಿತ್ವದಲ್ಲಿ ನಿರ್ಗತಿಕರು ಮತ್ತು ಕಡುಬಡವರಿಗೆ ಉಚಿತ ದಿನಸಿ ಕಿಟ್ ವಿತರಿಸಿ ಗುರುವಾರ ಮಾತನಾಡಿದರು.
ಎಲ್ಲರೂ ಕಡ್ಡಾಯವಾಗಿ ಮನೆಯಲ್ಲಿರಬೇಕು. ದಾನಿಗಳು, ಬಡವರ ಸಹಾಯಕ್ಕೆ ಮುಂದಾಗಬೇಕು. ಆರ್ಥಿಕ ನಷ್ಟ ಅನುಭವಿಸಿದರೂ ಸರಿ ಜನರ ಆರೋಗ್ಯ ಮುಖ್ಯ ಎಂದು ಸರ್ಕಾರ ಲಾಕ್ಡೌನ್ ಘೋಷಿಸಿದೆ. ಜನ ಸಹಕರಿಸಬೇಕು. ರೋಗ ನಮ್ಮಿಂದ ದೂರ ಹೋಗಬೇಕಾದರೆ ನಾವು ರಸ್ತೆಗೆ ಬಾರದೇ ಜನರಿಂದ ಅಂತರ ಕಾಯ್ದುಕೊಳ್ಳಬೇಕು ಎಂದರು.
ಸಂತೇಬೆನ್ನೂರು, ಗೆದ್ದಲಹಟ್ಟಿ, ಎಸ್ಬಿಆರ್ ಕಾಲನಿ ಸೇರಿ ವಿವಿಧೆಡೆ 1200 ಕಿಟ್ ವಿತರಿಸಲಾಯಿತು ಎಂದು ಮಾಹಿತಿ ನೀಡಿದರು.
ತಹಸೀಲ್ದಾರ್ ಡಾ.ಎನ್.ಜೆ.ನಾಗರಾಜ್ ಮಾತನಾಡಿ, ತಾಲೂಕಲ್ಲಿ 10 ಸಾವಿರ ಕಿಟ್ ವಿತರಿಸಲಾಗುತ್ತಿದೆ. ಅಗತ್ಯ ಇದ್ದರೆ ಮತ್ತೆ ಕೊಡಲಾಗುವುದು. ಒಬ್ಬರಿಗೆ ವೈರಸ್ ಕಾಣಿಸಿಕೊಂಡರೆ ತಾಲೂಕು ಲಾಕ್ ಆಗುತ್ತದೆ. ಎಚ್ಚರಿಕೆಯಿಂದ ಇರಬೇಕು ಎಂದರು.