ಚನ್ನಗಿರಿ: ಕರೊನಾ ಸೋಂಕು ತಡೆಗೆ ಪಟ್ಟಣದ ರಸ್ತೆಗಳನ್ನು ಬಂದ್ ಮಾಡಿದ ಪರಿಣಾಮ ಜನರು ಸರ್ಕಾರಿ ಆಸ್ಪತ್ರೆ ಹಾಗೂ ಬ್ಯಾಂಕ್ಗಳಿಗೆ ತೆರಳಲು ತೊಂದರೆಯಾಗಿದ್ದು, ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪೊಲೀಸರ ಕ್ರಮ ಸರಿಯಾಗಿದ್ದರೂ ರಾಷ್ಟ್ರೀಯ ಹೆದ್ದಾರಿ 13 ರ ಪಕ್ಕದಲ್ಲಿ ಸರ್ಕಾರಿ ಆಸ್ಪತ್ರೆ, ಬ್ಯಾಂಕ್, ತಾಲೂಕು ಕಚೇರಿಗಳಿವೆ. ರಸ್ತೆ ಬಂದ್ನಿಂದ ಹೆರಿಗೆ, ಅಪಘಾತ ಮತ್ತಿತರ ಆರೋಗ್ಯ ಸಮಸ್ಯೆಗಳಿದ್ದವರು ಆಸ್ಪತ್ರೆಗೆ ತೆರಳುವುದು ಕಷ್ಟವಾಗಿದೆ. ವಾಹನವನ್ನು ಅರ್ಧ ಕಿ.ಮೀ. ದೂರದಲ್ಲಿ ನಿಲ್ಲಿಸಿ ಆಸ್ಪತ್ರೆಗೆ ಬರಬೇಕು ಎಂದು ತಿಳಿಸಿದ್ದಾರೆ.
ಚನ್ನಗಿರಿಯಲ್ಲಿ ನೂರು ಹಾಸಿಗೆಯ ಸಾರ್ವಜನಿಕ ಆಸ್ಪತ್ರೆ ಇದ್ದು, ಪ್ರತಿದಿನ 600 ರೋಗಿಗಳು, 10 ಹೆರಿಗೆ ಪ್ರಕರಣ, ಅಪಘಾತದಲ್ಲಿ ಗಾಯಗೊಂಡವರು ಬರುತ್ತಾರೆ. ತಾಲೂಕಿನಲ್ಲಿ ಸರ್ಕಾರಿ ಆಸ್ಪತ್ರೆ ಬಿಟ್ಟರೆ ಖಾಸಗಿ ನರ್ಸಿಂಗ್ ಹೋಂಗಳಿಲ್ಲ. ಇಲ್ಲಿ ಮೂರು ಆಂಬುಲೆನ್ಸ್ಗಳಿದ್ದು, ತುರ್ತು ಕರೆ ಬಂದಾಗ ಸಂಚರಿಸಲು ದಾರಿ ಇಲ್ಲದೆ ಚಾಲಕರು ಪರದಾಡುವಂತಾಗಿದೆ.
ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡು ಆಂಬುಲೆನ್ಸ್ಗೆ ಕರೆ ಮಾಡಿದೆವು. ಅದು ತಡವಾಗಿ ಬಂದಿದ್ದಲ್ಲದೆ ಆಸ್ಪತ್ರೆಗೆ ಹೋಗುವಾಗ ದಾರಿ ಇಲ್ಲದೆ ಸುತ್ತಿ ಬಳಸಿ ಹೋಗಬೇಕಾಯಿತು. ಪೊಲೀಸರು ಸಹ ದಾರಿ ಮಾಡಿಕೊಡಲಿಲ್ಲ ಎಂದು ಮಾವಿನಕಟ್ಟೆ ಗ್ರಾಮಸ್ಥ ಪರಮೇಶ್ವರಪ್ಪ ವಿವರಿಸಿದರು.
ಕರೊನಾ ನಿಯಂತ್ರಣಕ್ಕೆ ಜನರು ವಾಹನಗಳಲ್ಲಿ ಓಡಾಡುವುದನ್ನು ನಿಲ್ಲಿಸುವ ಸಲುವಾಗಿ ರಸ್ತೆ ಬಂದ್ ಮಾಡಲಾಗಿದೆ. ಇದರಿಂದ ರೋಗಿಗಳಿಗೆ ತೊಂದರೆಯಾಗುವುದಾದರೆ ಪರಿಶೀಲನೆ ನಡೆಸಿ ಸೂಕ್ರ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಎಸ್ಪಿ ಪ್ರಶಾಂತ್ ಮನ್ನೋಳಿ ತಿಳಿಸಿದರು.