ಚನ್ನಗಿರಿ: ನಕಲಿ ಬಂಗಾರದ ನಾಣ್ಯ ನೀಡಿ ಲಕ್ಷಾಂತರ ರೂಪಾಯಿ ಲಪಟಾಯಿಸಿದ್ದ ವಂಚಕನನ್ನು ಸಂತೇಬೆನ್ನೂರು ಪೊಲೀಸರು ಮಂಗಳವಾರ ಬಂಧಿಸಿದ್ದು, 22 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.
ಸಂತೇಬೆನ್ನೂರಿನ ಎಸ್ಬಿಆರ್ ಕಾಲೋನಿಯ ದುಗ್ಗಪ್ಪ ಬಂಧಿತ ಆರೋಪಿ. ದುಗ್ಗಪ್ಪ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಗೂಡಿಗೆಹಳ್ಳಿಯಲ್ಲಿದ್ದ ಎಂ.ಕೆಂಪರಾಜು ಅವರೊಂದಿಗೆ ಫೋನ್ ಸಂಪರ್ಕ ಬೆಳೆಸಿ, ಮೊದಲು ಒಂದು ಅಸಲಿ ಚಿನ್ನದ ನಾಣ್ಯ ಕೊಟ್ಟು ವಿಶ್ವಾಸ ಗಳಿಸಿದ್ದಾನೆ. ಬಳಿಕ ಉಳಿದ 2.5 ಕೆಜಿ ನಕಲಿ ಬಂಗಾರದ ನಾಣ್ಯಗಳನ್ನು ನೀಡಿ ವಂಚಿಸಿದ್ದಾನೆ.
ಕೆಂಪರಾಜು ಎರಡು ದಿನಗಳ ನಂತರ ಸ್ನೇಹಿತರೊಂದಿಗೆ ನಾಣ್ಯಗಳನ್ನು ಪರೀಕ್ಷಿಸಿದಾಗ ಅಸಲಿಯತ್ತು ಬಯಲಾಗಿದೆ. ತಕ್ಷಣವೇ ಸಂತೇಬೆನ್ನೂರಿಗೆ ಬಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸಿಪಿಐ ಮಹೇಶ್ ನೇತೃತ್ವದಲ್ಲಿ ತನಿಖೆ ಆರಂಭಿಸಿದ ಪಿಎಸ್ಐ ಶಿವರುದ್ರಪ್ಪ ಮೇಟಿ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.