ಚಂಡಿಗಢ್: ಅಗೋಚರ ಶತ್ರು ಕರೊನಾ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವವರು ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ. ಇವರಿಗೆ ಸಾಥ್ ನೀಡುತ್ತಿರುವವರು ಪೊಲೀಸರು ಮತ್ತು ಸ್ವಚ್ಛತಾ ಸಿಬ್ಬಂದಿ.
ಇವರ ಕಾರ್ಯಕ್ಕೆ ಅಭಿನಂದನೆ ರೂಪದಲ್ಲಿ ಹಲವು ಯೋಜನೆಗಳನ್ನು ಚಂಡಿಗಢ್ ವಿಶ್ವವಿದ್ಯಾಲಯ ಘೋಷಿಸಿದೆ. ಇವರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗಾಗಿ ಶೇ.10 ಸಿಟುಗಳನ್ನು ಮೀಸಲಿಟ್ಟಿದೆ. ಕೋರ್ಸ್ ಶುಲ್ಕದಲ್ಲಿ ಶೇ.10 ರಿಯಾಯಿತಿ ನೀಡುವುದಾಗಿ ತಿಳಿಸಿದೆ. ಒಟ್ಟಾರೆ ಐದು ಕೋಟಿ ರೂ. ಮೊತ್ತದ ಸ್ಕಾಲರ್ಶಿಪ್ ಯೋಜನೆಯನ್ನು ಪ್ರಕಟಿಸಿದೆ.
ವಿಶೇಷವೆಂದರೆ ಮಾಧ್ಯಮದ ಸಿಬ್ಬಂದಿಯನ್ನೂ ಕರೊನಾ ವಾರಿಯರ್ಸ್ ಎಂದು ವಿವಿ ಪರಿಗಣಿಸಿದೆ ಹಾಗೂ ಮೇಲಿನ ಸೌಲಭ್ಯಗಳಿಗೆ ಅವರೂ ಭಾಜನರೆಂದು ಹೇಳಿದೆ.
ಈ ಯೋಜನೆಯಡಿಯಲ್ಲಿ ವಿವಿ ಮೂಲಕ ನಡೆಸಲಾಗುವ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ಗಳಲ್ಲಿ ಶೇ.10 ಸೀಟುಗಳನ್ನು ಮೀಸಲಿಡಲಾಗುತ್ತದೆ. ಈ ಯೋಜನೆಯನ್ವಯ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕೋರ್ಸ್ ಅವಧಿಯುದ್ದಕ್ಕೂ ಶುಲ್ಕದಲ್ಲಿ ಶೇ. 10 ವಿನಾಯ್ತಿ ನೀಡಲಾಗುತ್ತದೆ ಎಂದು ವಿವಿ ಕುಲಪತಿ ಸತ್ನಾಮ್ ಸಂಧು ಮಾಹಿತಿ ನೀಡಿದ್ದಾರೆ.
ಕರೊನಾ ವಾರಿಯರ್ಸ್ಗೆ ಇಡೀ ದೇಶವೇ ಆಭಾರಿಯಾಗಬೇಕಿದೆ. ಅವರ ಕುಟುಂಬದ ಹಾಗೂ ಅವರ ಮಕ್ಕಳಿಗಾಗಿ ವಿವಿ ಸ್ಕಾಲರ್ಶಿಪ್ ಯೋಜನೆ ಘೋಷಿಸುವ ಮೂಲಕ ಸಣ್ಣ ಸಹಾಯ ನೀಡುತ್ತಿದೆ ಎಂದು ಸತ್ನಾಮ್ ತಿಳಿಸಿದ್ದಾರೆ.
ಇದಲ್ಲದೇ, ವಿವಿ ಮೂಲಕ ಸುತ್ತಲಿನ ಹಳ್ಳಿಗಳ 200ಕ್ಕೂ ಅಧಿಕ ಜನರಿಗೆ ನಿತ್ಯವೂ ಆಹಾರ ಪೂರೈಸಲಾಗುತ್ತಿದೆ. ವಿವಿ 3,500 ಲೀಟರ್ ಸ್ಯಾನಿಟೈಸರ್ಅನ್ನು ವಿವಿಧ ಆಸ್ಪತ್ರೆಗಳಿಗೆ ವಿತರಿಸಿದೆ. ಮೊಹಾಲಿಯ ಜಿಲ್ಲಾಡಳಿತಕ್ಕಾಗಿ 1,000 ಹಾಸಿಗೆ ಸಾಮರ್ಥ್ಯದ ಐಸೋಲೇಷನ್ ಕೇಂದ್ರದ ವ್ಯವಸ್ಥೆ ಸ್ಥಾಪಿಸಿಕೊಟ್ಟಿದೆ ಎಂದು ಹೇಳಿದರು.
ಅಬ್ಬಾ… ಪಿಯುಸಿ ಪರೀಕ್ಷೆ ನಡೆಸಲ್ವಂತೆ, ನಿಟ್ಟುಸಿರುಬಿಟ್ಟ ವಿದ್ಯಾರ್ಥಿಗಳು, ಆನ್ಲೈನ್ ಅಭಿಯಾನಕ್ಕೆ ಮಣಿದ ಸರ್ಕಾರ