More

    ಸಂವಿಧಾನ ಜಾಗೃತಿ ಜಾಥಾದಲ್ಲಿ ರಕ್ತದಾನ ಶಿಬಿರ

    ಚಾಮರಾಜನಗರ: ಸಂವಿಧಾನ ದಿನಾಚರಣೆ ಪ್ರಯುಕ್ತ ಚಾಮರಾಜನಗರ ತಾಲೂಕಿನಲ್ಲಿ ಆಯೋಜಿಸಿರುವ ಜಾಗೃತಿ ಜಾಥಾ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರ, ಪುಸ್ತಕ ಜೋಳಿಗೆಯಂತಹ ವಿಶಿಷ್ಟ ಅರ್ಥಪೂರ್ಣ ಕಾರ್ಯಕ್ರಮಗಳು ಬುಧವಾರ ಗಮನ ಸೆಳೆದಿವೆ.

    ತಾಲೂಕಿನ ವೆಂಕಟಯ್ಯನಛತ್ರ ಗ್ರಾಮಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆರ್.ಲಾವಣ್ಯಾ, ಉಪಾಧ್ಯಕ್ಷ ಮಂಜುನಾಥ್, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಂದ್ರ ಪ್ರಸಾದ್ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಬರ ಮಾಡಿಕೊಂಡರು.

    ಕಳಸ ಹೊತ್ತ ಮಹಿಳೆಯರು, ಶಾಲಾ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಮುಖಂಡರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು. ವಿಚಾರವಾದಿ ಕೆ.ಎಂ.ನಾಗರಾಜು, ನೋಡಲ್ ಅಧಿಕಾರಿ ವೆಂಕಟೇಶ್, ಸಹ ಶಿಕ್ಷಕರಾದ ಮಲ್ಲೇಶ್ ಉಪಸ್ಥಿತರಿದ್ದರು.
    ಬಿಸಲವಾಡಿಯಲ್ಲಿ ಸಂವಿಧಾನ ಜಾಗೃತಿ ಅಂಗವಾಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ ಆಯೋಜಿಸಿದ್ದು ವಿಶೇಷವಾಗಿತ್ತು. ಬಿಸಲವಾಡಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಿ.ರಮ್ಯಾ, ಉಪಾಧ್ಯಕ್ಷೆ ಬೇಬಿ ಈಶ್ವರ್ ಪುಷ್ಪಾರ್ಚನೆ ಮಾಡುವ ಮೂಲಕ ಅದ್ದೂರಿಯಾಗಿ ಸಂವಿಧಾನ ಜಾಗೃತಿ ಜಾಥಾವನ್ನು ಸ್ವಾಗತಿಸಿದರು.

    ಗ್ರಾಮದಲ್ಲಿ ನಡೆದ ಮೆರವಣಿಗೆ ವೇಳೆ ವೀರಗಾಸೆ, ಡೊಳ್ಳುಕುಣಿತ, ಶಾಲಾ ಮಕ್ಕಳ ಬ್ಯಾಂಡ್‌ವಾದನ ಮೆರಗು ನೀಡಿದವು. ಗ್ರಾಮಸ್ಥರು ಕೋಲಾಟದ ಮೂಲಕ ಉತ್ಸಾಹದಿಂದ ಪಾಲ್ಗೊಂಡರು. ಚಿಕ್ಕಮಕ್ಕಳು ಡಾ. ಬಿ.ಆರ್. ಅಂಬೇಡ್ಕರ್ ಅವರ ವೇಷ ಭೂಷಣ ಧರಿಸಿ ಗಮನಸೆಳೆದರು.
    ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಂಶುಪಾಲರಾದ ಪ್ರೊ. ದೇವರಾಜು ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಸರ್ವರಿಗೂ ಸಮಾನತೆ ಇದೆ. ಜನರ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಎಲ್ಲವನ್ನೂ ಸಂವಿಧಾನ ಒಳಗೊಂಡಿದೆ. ಇದರ ಆಶಯಗಳನ್ನು ಅರಿತು ಪ್ರತಿಯೊಬ್ಬರೂ ಪ್ರಜ್ಞಾವಂತಿಕೆಯಿಂದ ನಡೆದುಕೊಳ್ಳಬೇಕು ಎಂದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚಿಕ್ಕಬಸವಯ್ಯ ಸಂವಿಧಾನ ಪೀಠಿಕೆ ಬೋಧಿಸಿದರು.

    ಕೋಡಿಉಗನೆ ಗ್ರಾಮದಲ್ಲಿಯೂ ವಿಶೇಷವಾಗಿ ಸಂವಿಧಾನ ಜಾಗೃತಿ ಜಾಥಾ ನಡೆಯಿತು. ಜನರು ಹುರುಪಿನಿಂದ ಭಾಗವಹಿಸಿದರು. ಅಟ್ಟುಗೂಳಿಪುರದಲ್ಲಿಯೂ ಸಂವಿಧಾನ ಜಾಗೃತಿ ಜಾಥಾಗೆ ಸಂಭ್ರಮದಿಂದ ಸ್ವಾಗತಿಸಲಾಯಿತು. ಸಿದ್ದಯ್ಯನಪುರದಲ್ಲಿಯೂ ಅದ್ದೂರಿಯಾಗಿ ಮೆರವಣಿಗೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts