ಚಳ್ಳಕೆರೆ: ಸರ್ಕಾರಿ ಶಾಲೆಗಳ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ವಯಂ ಸೇವಾ ಸಂಸ್ಥೆಗಳು ಕೈಲಾದ ನೆರವು ನೀಡಿ ಔದಾರ್ಯ ಮೆರೆಯಬೇಕು ಎಂದು ಸಿರಗುಪ್ಪದ ಸಮಾಜ ಸೇವಕ ಬಿ.ಕೆ. ನರಸಪ್ಪ ಹೇಳಿದರು.
ತಾಲೂಕಿನ ಚಟ್ಟೇಕಂಬ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂರು ವಿದ್ಯಾರ್ಥಿಗಳಿಗೆ ಸೋಮವಾರ ಉಚಿತವಾಗಿ ತಟ್ಟೆ, ಲೋಟ, ಟೈ, ಬೆಲ್ಟ್, ನೋಟ್ ಬುಕ್ ವಿತರಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವವರಲ್ಲಿ ಬಹುತೇಕ ಬಡ ಮಕ್ಕಳಿದ್ದಾರೆ. ಅವರಿಗೆ ಕಲಿಕಾ ಸಾಮಗ್ರಿ ಕೊಳ್ಳುವುದೂ ಕಷ್ಟವಿದೆ ಇಂತಹ ಮಕ್ಕಳಿಗೆ ಉಳ್ಳವರು, ಸಂಘ ಸಂಸ್ಥೆಗಳು ನೆರವು ನೀಡಬೇಕು ಎಂದರು.
ಮುಖ್ಯಶಿಕ್ಷಕ ತಿಪ್ಪೇಸ್ವಾಮಿ ಮಾತನಾಡಿ, ಸರ್ಕಾರ ಉಚಿತ ಸಮವಸ್ತ್ರ, ಬಿಸಿಯೂಟ, ಬೈಸಿಕಲ್ ಇತರ ಸೌಲಭ್ಯ ನೀಡುತ್ತಿದ್ದರೂ ವಾರ್ಷಿಕವಾಗಿ ಬೇಕಾಗುವ ಕಲಿಕಾ ಸಾಮಗ್ರಿ ಕೊಳ್ಳಲು ದಾನಿಗಳ ಸಹಕಾರ ಅಗತ್ಯ ಎಂದರು. ಶಿಕ್ಷಕರಾದ ಎಂ.ಟಿ. ಸುಬ್ರಹ್ಮಣ್ಯ, ಟಿ. ಆನಂದಪ್ಪ, ನರಸಿಂಹಮೂರ್ತಿ ಇತರರಿದ್ದರು.