ಚಳ್ಳಕೆರೆ: ಸಾಹಿತ್ಯ ಕ್ಷೇತ್ರಕ್ಕೆ ಚಿತ್ರದುರ್ಗ ಜಿಲ್ಲೆ ನೀಡಿದ ಕೊಡುಗೆಯಲ್ಲಿ ಚಳ್ಳಕೆರೆ ತಾಲೂಕಿಗೆ ಮೇಲ್ಪಂಕ್ತಿಯ ಸ್ಥಾನವಿದೆ. ಅಂತೆಯೇ ನಮ್ಮಲ್ಲಿನ ಯುವ ಪೀಳಿಗೆಯಲ್ಲಿ ಸಾಹಿತ್ಯ ಚಿಂತನೆ ಬೆಳೆಯಬೇಕಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ರೋಟರಿ ಬಾಲಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕವಿಗೋಷ್ಠಿ, ವೆಂಕಟ್ರಮಣ ಬೆಳಗೆರೆ ಅವರ ‘ಪುಟ್ರಾಮನ ಪರ್ಪಂಚ’ ಕಾದಂಬರಿ ಬಿಡುಗಡೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಸೇರಿ ಕನ್ನಡಪರ ಸಂಘಟನೆಗಳು ಗ್ರಾಮೀಣ ಭಾಗದ ಪ್ರತಿಭಾವಂತರನ್ನು ಗುರುತಿಸಿ ಸಮಾಜದ ಮುಖ್ಯ ಭೂಮಿಕೆಗೆ ಪರಿಚಯಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಬೆಳಗೆರೆ ಮತ್ತು ತಳಕು ಮನೆತನದ ಸೀತರಾಮ ಶಾಸ್ತ್ರಿ, ಬೆಳಗೆರೆ ಕೃಷ್ಣಶಾಸ್ತ್ರಿ, ಜಾನಕಮ್ಮ, ತಳುಕಿನ ತರಾಸು, ಟಿ.ಎಸ್.ವೆಂಕಟಣ್ಣಯ್ಯ ಮತ್ತು ಬುಡಕಟ್ಟು ಬದುಕಿನ ಸಿರಿಯಜ್ಜಿ ಅವರ ಸಾಹಿತ್ಯ ಸೇವೆಯಿಂದ ನಮ್ಮ ತಾಲೂಕಿನ ಪ್ರಾದೇಶಿಕತೆ, ಸಂಸ್ಕೃತಿ, ಸಾಹಿತ್ಯ ಜನಮನ್ನಣೆ ಪಡೆಯುವ ಜತೆಗೆ ದಾಖಲೆಯಾಗಿ ಉಳಿದಿದೆ ಎಂದು ಹೇಳಿದರು.
ಬರಪೀಡಿತ ತಾಲೂಕಿನಲ್ಲಿ ಬುಡಕಟ್ಟು ಸಂಸ್ಕೃತಿ ಶ್ರೀಮಂತವಾಗಿದೆ. ಆಧುನಿಕ ಬದಲಾವಣೆಯಲ್ಲಿ ಬುಡಕಟ್ಟು ಪದ್ಧತಿಗಳ ಆಚರಣೆ ಜೀವಂತಿಕೆ ಇರುವಲ್ಲಿ ಗ್ರಾಮೀಣ ಭಾಗದ ಜನರ ಬದುಕನ್ನು ಪರಿಚಯಿಸಬೇಕು. ಇತಿಹಾಸ ಸಂಶೋಧಕರು ಮತ್ತು ಜನಪದ ತಜ್ಞರ ಅಧ್ಯಯನದಿಂದ ದಾಖಲೆ ಕಾಣುತ್ತಿದ್ದೇವೆ ಎಂದು ಹೇಳಿದರು.
ಜಾನಪದ ವಿದ್ವಾಂಸ ಮೀರಸಾಬಿಹಳ್ಳಿ ಶಿವಣ್ಣ ಮಾತನಾಡಿ, ಯುವ ಸಮುದಾಯದಲ್ಲಿ ಸಾಹಿತ್ಯ ಅಭಿರುಚಿ ಬೆಳೆಯಬೇಕು. ಇಲ್ಲಿನ ಮ್ಯಾಸ ಬೇಡ, ಕಾಡುಗೊಲ್ಲರ ಸಂಸ್ಕೃತಿ ವಿಶೇಷವಾಗಿದೆ. ದಾವಣಗೆರೆ ವಿವಿಯಿಂದ ನೀಡಿರುವ ಡಾಕ್ಟರೇಟ್ ಪದವಿ ಬುಡಕಟ್ಟು ಸಂಸ್ಕೃತಿಗೆ ಸಿಕ್ಕ ಗೌರವ ಎಂದು ಹೇಳಿದರು.