ಚಳ್ಳಕೆರೆ: ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿ ತವರಿನಿತ್ತ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ಒರಿಸ್ಸಾ ಮೂಲದ 12 ಮಂದಿ ಕೂಲಿ ಕಾರ್ಮಿಕರಿಗೆ ತಾಲೂಕು ಆಡಳಿತ ನೆರವಾಗಿದೆ.
ಭರಮಸಾಗರದ ಇಟ್ಟಿಗೆ ಭಟ್ಟಿಯೊಂದರಲ್ಲಿ ಒಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಲಾಕ್ಡೌನ್ ಬಳಿಕ ಕಷ್ಟಕ್ಕೆ ಸಿಲುಕಿದ್ದರು. ಇವರಿಗೆ ಒರಿಸ್ಸಾಕ್ಕೆ ತೆರಳಲು ಇಟ್ಟಿಗೆ ಭಟ್ಟಿ ಮಾಲೀಕ ಕೂಡ ಸಹಾಯ ಮಾಡಿಲ್ಲ. ಊಟಕ್ಕೂ ಸಮಸ್ಯೆಯಾದ ಕಾರಣ ಕಾರ್ಮಿಕರು ನಡೆದುಕೊಂಡು ಚಿತ್ರದುರ್ಗ ಮಾರ್ಗವಾಗಿ ಚಳ್ಳಕೆರೆ ಆಗಮಿಸಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ ಇಟ್ಟಿಗೆ ಭಟ್ಟಿ ಮಾಲೀಕನಿಗೆ ದೂರವಾಣಿ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು.
ಆರು ತಿಂಗಳಿನಿಂದ ದುಡಿಸಿಕೊಂಡು ಬಸ್ ಸಂಚಾರ ಇಲ್ಲದ ಲಾಕ್ಡೌನ್ ಪರಿಸ್ಥಿತಿಯಲ್ಲಿ ಏಕಾಏಕಿ ಬೀದಿಗೆ ತಳ್ಳಿದ್ದೀಯಾ. ಈಗಲೇ ತಾಲೂಕು ಕಚೇರಿಗೆ ಬರಬೇಕು. ಇಲ್ಲದಿದ್ದಲ್ಲಿ ಕ್ರಿಮಿನಲ್ ಕೇಸ್ ದಾಖಲು ಮಾಡುವುದಾಗಿ ಎಚ್ಚರಿಕೆ ನೀಡಿದರು.
ನಂತರ ಕಚೇರಿಗೆ ಆಗಮಿಸಿದ ಮಾಲೀಕ ಸ್ವತಃ ವಾಹನ ವ್ಯವಸ್ಥೆ ಮಾಡಿಕೊಂಡು ಬೆಂಗಳೂರಿಗೆ ತಲುಪಿಸಿ ಅಲ್ಲಿಂದ ಒರಿಸ್ಸಾಕ್ಕೆ ರೈಲು ಮೂಲಕ ತವರಿಗೆ ಕಳುಹಿಸಿಕೊಡುವುದಾಗಿ ತಿಳಿಸಿದನು.
50 ಕಿಮೀ ನಡೆದುಕೊಂಡು ಬಂದಿದ್ದ ಕಾರ್ಮಿಕರು: ಹಣವಿಲ್ಲದ ಕಾರಣ ಕಾರ್ಮಿಕರು 50 ಕಿಮೀ ವರೆಗೆ ನಡೆದುಕೊಂಡು ಚಳ್ಳಕೆರೆ ಬಂದಿದ್ದರು. ಊಟ ಮಾಡದ ಕಾರಣ ಬಳಲಿದ್ದರು. ಸ್ಥಳೀಯರಾದ ಎಸ್.ರವಿ, ಅಂಜಿನಿ, ಸಿದ್ದಾಪುರ ಚನ್ನಿಗರಾಮಯ್ಯ, ಸಿ.ತಿಪ್ಪೇಸ್ವಾಮಿ ಇತರರು ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು.