ಚಳ್ಳಕೆರೆ: ವಿದ್ಯಾರ್ಥಿಗಳು ಪ್ರೌಢ ಹಂತದಲ್ಲಿ ನಿಶ್ಚಿತ ಗುರಿ ಇಟ್ಟುಕೊಂಡು ಸಾಗಿದರೆ ಉನ್ನತ ಶಿಕ್ಷಣ ಸಾಧನೆಗೆ ಆಧಾರವಾಗುತ್ತದೆ ಎಂದು ಮುಖ್ಯಶಿಕ್ಷಕ ಕೆ.ಜಿ.ಪ್ರಶಾಂತ್ ಹೇಳಿದರು.
ತಾಲೂಕಿನ ಪಗಡಲಬಂಡೆ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಕೊರ್ಲಕುಂಟೆ ಮತ್ತು ಪಗಡಲಬಂಡೆ ವಿದ್ಯಾರ್ಥಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ಅಂತರ್ ಶಾಲೆಗಳ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಪ್ರಗತಿ ಸಾಧಿಸಲು ಅಂತರ ಶಾಲೆಗಳ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ರಸಪ್ರಶ್ನೆ ಮತ್ತು ಕೌಶಲ ಚಟುವಟಿಕೆಗಳನ್ನು ಮಾಡಿಸಲಾಗುತ್ತಿದೆ. ಇದರಿಂದ ಪರೀಕ್ಷೆ ಎದುರಿಸುವ ಆತ್ಮಸ್ಥೈರ್ಯ ಮತ್ತು ವಿಷಯಗಳ ಮನವರಿಕೆ ಆಗುತ್ತದೆ ಎಂದರು.
ಮುಖ್ಯಶಿಕ್ಷಕ ಎಸ್.ಹನುಮಂತರಾಯ ಮಾತನಾಡಿ, ಗುಂಪು ಅಧ್ಯಯನದಿಂದ ಮಕ್ಕಳಲ್ಲಿನ ಗೊಂದಲ, ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದು. ತಿಳಿದ ವಿಚಾರಗಳನ್ನು ಪರಿಪೂರ್ಣವಾಗಿ ಅರಿಯಲು ರಸಪ್ರಶ್ನೆ ಕಾರ್ಯಕ್ರಮ ಆಧಾರ ಎಂದು ತಿಳಿಸಿದರು.
ಶಿಕ್ಷಕರಾದ ನೀಲಮ್ಮ, ನಫೀಜಾ ಪರ್ವಿನ್, ಮಂಜುನಾಥ್, ಆರ್.ಎಂ.ಶಿವಕುಮಾರ್, ಬಿ.ತಿಮ್ಮರಾಜ್, ಬಿ.ಎನ್.ಸುಧಾ, ಬಿ.ಎಂ.ರಾಧಮ್ಮ, ಆರ್.ನರಸಿಂಹಮೂರ್ತಿ, ಗುರುರಾಜ್, ಭಾರತಿ ಮತ್ತಿತರರಿದ್ದರು.