ಚಳ್ಳಕೆರೆ: ಉಳಿತಾಯ ಮನೋಭಾವ ಬದುಕಿನ ಭದ್ರತೆಗೆ ದಾರಿ ಮಾಡಿಕೊಡುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗಪ್ಪ ಹೇಳಿದರು.
ನಗರದ ಜೈನ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗ್ರಾಮೀಣಾಭಿವೃದ್ಧಿ ಸಂಸ್ಥೆ ವಾರ್ಷಿಕೋತ್ಸವ ಮತ್ತು ಸ್ನೇಹ ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿ ಸಂಸ್ಥೆಯ ಮಹಿಳಾ ಸಂಘಗಳ ಸ್ಥಾಪನೆ ಆರಂಭದಲ್ಲಿ ಪಡೆದ ಸಾಲ ತೀರುವಳಿ ಆಗುತ್ತಿರಲಿಲ್ಲ. ಈಗ ಪ್ರಾದೇಶಿಕವಾಗಿ ಜಿಲ್ಲೆಯಲ್ಲಿ ತಾಲೂಕೇ ಸಾಲ ಮರುಪಾವತಿಯಲ್ಲಿ ಮೊದಲ ಸ್ಥಾನದಲ್ಲಿ ಇದೆ ಎಂದು ತಿಳಿಸಿದರು.
ಕೌಟುಂಬಿಕ ಸಮಸ್ಯೆ, ಸ್ವ ಉದ್ಯೋಗ ಕೈಗೊಳ್ಳಲು ಸಂಘದಿಂದ ಸುಲಭವಾಗಿ ಸಾಲ ಸೌಲಭ್ಯ ಸಿಗಲಿದೆ. ಇದರ ಸದುಪಯೋಗ ಪಡೆದು ಜೀವನಮಟ್ಟ ಸುಧಾರಿಸಿಕೊಳ್ಳಬೇಕು ಎಂದು ಹೇಳಿದರು.
ಸಂಘದ ಜಿಲ್ಲಾ ನಿರ್ದೇಶಕ ಡಾ.ದಿನೇಶ್ ಮಾತನಾಡಿ, ಮಹಿಳಾ ಸಂಘಟನೆಯಿಂದ ಸ್ತ್ರೀ ಸಬಲೀಕರಣಕ್ಕೆ ಸಾಧ್ಯವಾಗುತ್ತದೆ. ಆರ್ಥಿಕ ನಿರ್ವಹಣೆ ಕೌಶಲ ವೃತ್ತಿಯಾಗುತ್ತದೆ. ಸುಂದರ ಜೀವನ ನಿರ್ಮಾಣಕ್ಕೆ ಸ್ವ ಸಹಾಯ ಸಂಘಗಳು ಸಹಕಾರಿಯಾಗಿವೆ ಎಂದರು.
ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಆರ್.ನೇತಾಜಿ ಪ್ರಸನ್ನ, ಗ್ರಾಮೀಣಾಭಿವೃದ್ಧಿ ಸಂಸ್ಥೆಯ ತಾಲೂಕು ಅಧಿಕಾರಿ ಲತಾ ಬಂಗೇರ, ವಲಯ ಅಧಿಕಾರಿಗಳಾದ ಸರಸ್ವತಿ, ರಂಜನಾ ಮತ್ತಿತರರಿದ್ದರು.